
ಕುಣಿಗಲ್: ನಾಡಿನಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾದಂತೆ ಸಂಸ್ಕಾರ ಕಡಿಮೆಯಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಬಿಜಿಎಸ್ ಶಾಲೆಯಲ್ಲಿ ಬುಧವಾರ ಸಂಜೆ ನಡೆದ ಮಾತೃ ಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರ ಬಂದ ಸಮಯದಲ್ಲಿ ಸಾಕ್ಷರತಾ ಪ್ರಮಾಣ ಶೇ 20 ಇದ್ದು, ಪ್ರಸ್ತುತ ಶೇ 90 ಇದೆ. ಸರ್ಕಾರ, ಮಠಗಳು ಸಾಕ್ಷರತಾ ಪ್ರಮಾಣಕ್ಕೆ ಶ್ರಮಿಸಿದ್ದರೂ, ಸಂಸ್ಕಾರಯುಕ್ತ ಶಿಕ್ಷಣದ ಕೊರತೆಯಿಂದಾಗಿ ವಿದ್ಯಾವಂತರಿಂದಲೇ ದೇಶಕ್ಕೆ ಆಪತ್ತು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಶೇ 65ರಷ್ಟು ಮಕ್ಕಳು ಆನ್ಲೈನ್, ಮೋಬೈಲ್ ಗೀಳಿಗೆ ಒಳಗಾಗಿದ್ದಾರೆ. ಪೋಷಕರು ಮೋಬೈಲ್ ಅನ್ನು ಅಗತ್ಯವಿದ್ದಾಗ ಮಾತ್ರ ಬಳಕೆ ಮಾಡಲು ಸಲಹೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಆಯಾಗಳ, ಶೌಚಾಲಯಗಳ ನಿರ್ವಹಣೆಯ ಕೊರತೆ ಇದೆ. ಸರ್ಕಾರ ಶಾಶ್ವತ ಪರಿಹಾರ ನೀಡಬೇಕಿದೆ. ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಿಂದ ಶೇ 60 ಸಾವುಗಳು ಸಂಭವಿಸುತ್ತಿದ್ದು ಝಂಕ್ ಫುಡ್ ಅಪಾಯಕಾರಿ ಎಂದರು.
ಕಾರ್ಯಕ್ರಮದಲ್ಲಿ ಸಾವಿರಾರು ಪೋಷಕರು ತಮ್ಮ ಮಕ್ಕಳಿಗೆ ಭಕ್ಷ್ಯಗಳನ್ನು ತಂದು ಸಾಮೂಹಿಕವಾಗಿ ಬಡಿಸಿ ಸಂಭ್ರಮಿಸಿದರು. ವಿದ್ಯಾರ್ಥಿ ಯಶಸ್ ಜಾನಪದಕಲೆಗಳ ಬಗ್ಗೆ, ಕೃತ್ತಿಕಾ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
ತುಮಕೂರು ಶಾಖಾಮಠದ ಮಂಗಳನಾಥ ಸ್ವಾಮೀಜಿ, ಸತ್ಕೀರ್ತಿನಾಥ ಸ್ವಾಮೀಜಿ, ಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲುದ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಡಾ.ರವಿ. ಡಿ.ನಾಗರಾಜಯ್ಯ, ಆಡಳಿತಾಧಿಕಾರಿ ಶಿವರಾಮರೆಡ್ಡಿ, ಮಧೂಸೂಧನ್, ಸಿಪಿಐ ಮಾದ್ಯಾ ನಾಯಕ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್, ಪ್ರಾಂಶುಪಾಲ ವೆಂಕಟಮುನಿರೆಡ್ಡಿ, ಮುಖ್ಯ ಶಿಕ್ಷಕ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.