ಶಿರಾ: ನಗರಸಭೆ ಚುನಾವಣೆಗಾಗಿ ಸೋಮವಾರ ಬೆಳಿಗ್ಗೆಚುನಾವಣೆ ವೇಳಾಪಟ್ಟಿ ಪ್ರಕಟಿಸಿದ್ದ ರಾಜ್ಯ ಚುನಾವಣೆ ಆಯೋಗ ಮಧ್ಯಾಹ್ನದ ವೇಳೆಗೆ ವೇಳಾಪಟ್ಟಿಯನ್ನು ಹಿಂದಕ್ಕೆ ಪಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
31 ವಾರ್ಡ್ಗಳಿಗೆ ಏ. 27ರಂದು ಚುನಾವಣೆ ನಡೆಸುವುದಾಗಿ ಆಯೋಗ ವೇಳಾಪಟ್ಟಿ ಪ್ರಕಟಿಸಿತ್ತು. ನಗರಸಭೆಯ ಜೊತೆಗೆ ದೊಡ್ಡಬಳ್ಳಾಪುರ, ರಾಮನಗರ, ಚನ್ನಪಟ್ಟಣ, ಭದ್ರಾವತಿ, ಮಡಿಕೇರಿ, ಬೀದರ್ ನಗರಸಭೆ. ವಿಜಯಪುರ, ಬೇಲೂರು, ತರೀಕೆರೆಗಳ ಪುರಸಭೆ, ಗುಡಿಬಂಡೆ ಹಾಗೂ ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿ ಸೇರಿದಂತೆ 7 ನಗರಸಭೆ, 3 ಪುರಸಭೆ, 2 ಪಟ್ಟಣ ಪಂಚಾಯತಿ ಸೇರಿದಂತೆ ಒಟ್ಟು 12 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಧಿಸೂಚನೆ ಹೊರಡಿಲಾಗಿತ್ತು.
ಆದರೆ ಮಧ್ಯಾಹ್ನ ನಂತರ ಶಿರಾ, ದೊಡ್ಡಬಳ್ಳಾಪುರ ನಗರಸಭೆ ಹಾಗೂ ತರೀಕೆರೆ ಪುರಸಭೆಗೆ ಹೊರಡಿಸಿದ್ದ ವೇಳಾಪಟ್ಟಿಯನ್ನು ತಾಂತ್ರಿಕ ಕಾರಣ ದಿಂದ ಹಿಂಪಡೆದಿದೆ. ಮುಂದಿನ ಆದೇ ಶದ ನಂತರ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸುವುದಾಗಿ ಆಯೋಗ ತಿಳಿಸಿದೆ.
ರಾಜ್ಯದ ವಿವಿಧೆಡೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು ಅಲ್ಲಿ ಚುನಾಯಿತ ಪ್ರತಿನಿಧಿಗಳು ಅಧಿಕಾರ ನಡೆಸುತ್ತಿದ್ದಾರೆ. ಆದರೆ, ಶಿರಾದಲ್ಲಿ ಕಳೆದ ಎರಡು ವರ್ಷದಿಂದ ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳೇ ಕಾರ್ಯ ನಿರ್ವಹಿಸುತ್ತಿದ್ದು ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿದ್ದಾರೆ.
ವಾರ್ಡ್ ಮೀಸಲಾತಿಯ ಗೊದಲದಿಂದಾಗಿ ಕೆಲವರು ಕೋರ್ಟ್ ಮೆಟ್ಟಿಲು ಹತ್ತಿದ್ದ ಹಿನ್ನೆಲೆ ಯಲ್ಲಿ ಚುನಾವಣೆ ನನೆಗುದಿಗೆ ಬೀಳು ವಂತಾಗಿದೆ. ನಾಲ್ಕು ಬಾರಿ ವಾರ್ಡ್ ಮೀಸಲಾಗಿ ಪ್ರಕಟವಾದರೂ ನ್ಯಾಯಾಲ ಯದ ಬಾಗಿಲು ತಟ್ಟುತ್ತಿರುವುದರಿಂದ ಚುನಾವಣೆ ವಿಳಂಬವಾಗಿದೆ. ಪ್ರತಿ ಬಾರಿ ಮೀಸಲಾತಿ ಪ್ರಕಟವಾದ ಸಮಯದಲ್ಲಿ ಯಾರಾದರೂ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದರೆ ಎಲ್ಲರನ್ನು ತೃಪ್ತಿಪಡಿಸಿ ಚುನಾವಣೆ ನಡೆಸಲು ಸಾಧ್ಯವೇ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.
ಕಳೆದ ಎರಡು ವರ್ಷದಿಂದ ಚುನಾವಣೆಗೆ ಸ್ವರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಆಕಾಂಕ್ಷಿಗಳಿಗೆ ಹೆಚ್ಚಿನ ನಿರಾಶೆಯಾಗಿದೆ. ಪದೇ ಪದೇ ಚುನಾವಣೆ ಮುಂದಕ್ಕೆ ಹೋದರೆ ಮತದಾರರನ್ನು ಹಿಡಿ ದಿಟ್ಟುಕೊಳ್ಳುವುದು ಕಷ್ಟದ ಕೆಲಸ. ಜೊತೆಗೆ ಜೊತೆಯಲ್ಲಿರುವ ಮುಖಂಡ ರನ್ನು ಸಮಜಾಯಿಷಿಕೊಂಡು ಹೋಗುವುದು ಸಹ ಕಷ್ಟವಾಗುತ್ತಿದೆ. ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿರುವುದರಿಂದ ಚುನಾವಣೆ ಮುಂದಕ್ಕೆ ಹೋದರೆ ನಮ್ಮ ಗತಿ ಹೇಗೆ ಎನ್ನುವ ಭಯ ಆಕಾಂಕ್ಷಿಗಳಿಗೆ ಕಾದುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.