
ಕೊರಟಗೆರೆ: ಇತ್ತೀಚಿನ ದಿನಗಳಲ್ಲಿ ಮಠ ಮಾನ್ಯಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಸಮಾಜದ ಅತ್ಯಂತ ಕಡು ಬಡವರು ವಿದ್ಯಾವಂತರಾಗಲು ಅನುಕೂಲವಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಉಪ್ಪಿನ ಕೊಳಗ ಒಕ್ಕಲಿಗರ ಸೇವಾ ಸಮಾಜ ತುಮಕೂರು ತಾಲ್ಲೂಕಿನ ಲಿಂಗಾಪುರ ಗ್ರಾಮದ ಕೊಳಗ ಮಹಾಲಕ್ಷ್ಮಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಸಮಾಜದ ಉನ್ನತ ಸ್ಥಾನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ಸಾಧನೆ ಇರಬೇಕು. ಪೋಷಕರು ಮಕ್ಕಳ ಮದುವೆ ಇನ್ನಿತರೆ ಕಾರಣಗಳಿಗೆ ತಮ್ಮ ಜಮೀನುಗಳನ್ನು ಮಾರಾಟ ಮಾಡಬೇಡಿ, ಆಸ್ತಿ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಯಾವುದೇ ಜನಾಂಗದಲ್ಲಿ ಒಳಪಂಗಡ ವಿಂಗಡಣೆ ಮಾಡುವುದನ್ನು ಕಡಿಮೆ ಮಾಡಬೇಕು. ಇದರಿಂದ ಸಮುದಾಯದ ಏಳಿಗೆ ಕುಂಠಿತವಾಗಲಿದೆ. ಸಮುದಾಯ ಭವನ ಉನ್ನತೀಕರಣಕ್ಕೆ ₹25 ಲಕ್ಷ ಅನುದಾನ ಹಾಗೂ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕಾಗಿ ನಿಶ್ಚಿತ ಠೇವಣಿ ₹5 ಲಕ್ಷ ನೀಡುವುದಾಗಿ ತಿಳಿಸಿದರು.
ಕಾಂಗ್ರೆಸ್ ಮುಖಂಡ ಮುರಳೀಧರ ಹಾಲಪ್ಪ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಯಲ್ಲಿನ ಸಾಧನೆ ಅವರ ಪೋಷಕರಿಗೆ ನೀಡುವ ನಿಜವಾದ ಉಡುಗೊರೆ. ವಿದ್ಯಾಭ್ಯಾಸದಿಂದ ಸಾಧಿಸಿದ ಗೆಲುವು ಇಡೀ ಸಮಾಜ ನಿಮ್ಮನ್ನು ತಲೆ ಎತ್ತಿ ನೋಡುವಂತೆ ಮಾಡುತ್ತದೆ. ಕಲಿಕಾ ಹಂತದಲ್ಲಿ ಮೊಬೈಲ್ಗಳಿಗೆ ದಾಸರಾಗದೆ ಶಿಕ್ಷಣದ ಕಡೆಗೆ ಆಸಕ್ತಿ ವಹಿಸಿ ಎಂದರು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅವಿನಾಶ್, ವಿ.ನಾಗೇಶ್ ಅವರನ್ನು ಸತ್ಕರಿಸಲಾಯಿತು. 120 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಉಪ್ಪಿನಕೊಳಗ ಸೇವಾ ಸಮಾಜದ ಅಧ್ಯಕ್ಷ ಜೆ.ಎನ್.ನರಸಿಂಹರಾಜು, ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಸಿ.ಲಕ್ಷ್ಮೀಶ್, ಗೌರವಾಧ್ಯಕ್ಷ ಚಿಕ್ಕರಾಮಣ್ಣ, ಟ್ರಸ್ಟ್ ಅಧ್ಯಕ್ಷ ಎನ್.ಕೃಷ್ಣಮೂರ್ತಿ, ಉಪಾಧ್ಯಕ್ಷ ರಾಧೆಶ್ಯಾಮ, ಕಾರ್ಯದರ್ಶಿ ಜಿ.ಎಂ.ನರಸಿಂಹರಾಜು, ಜಂಟಿ ಕಾರ್ಯದರ್ಶಿ ಡಿ.ಇ.ಮಲ್ಲಯ್ಯ ಹಾಗೂ ಜಿ.ಎಸ್.ರವಿಕುಮಾರ್, ಎಲ್.ವಿ.ಪ್ರಕಾಶ್, ಶ್ರೀನಾಥ್, ರೇಣುಕಯ್ಯ, ವಿಜಯೇಂದ್ರ, ಯೋಗೀಶ್, ಕೆಂಪಯ್ಯ, ಡಾ. ಗುರುಮಂಜುನಾಥ್, ವಿ.ಕೆ.ವೀರಕ್ಯಾತರಾಯ, ತುಳಸಮ್ಮ, ಸುಜಿತ್, ಕರಿಯಪ್ಪ, ಸಿದ್ದಲಿಂಗಪ್ಪ ಹಾಜರಿದ್ದರು.