ಕೊಡಿಗೇನಹಳ್ಳಿ: ಪುರವರ ನಾಡಕಚೇರಿ ಕಾರ್ಯಾಲಯ ಮೊದಲೇ ಚಿಕ್ಕ ಕಟ್ಟಡ. ಅಂತಹದ್ದರಲ್ಲಿ ಅದಕ್ಕೆ ಪ್ರಯಾಣಿಕರ ತಂಗುದಾಣ ಅಡ್ಡವಿರುವುದರಿಂದ ನಾಡಕಚೇರಿಯನ್ನು ಹುಡುಕಿಕೊಂಡು ಬರುವ ಹೊಸಬರಿಗೆ ಹುಡುಕುವುದೇ ಸವಾಲು ಎನ್ನುವುದು ಹೋಬಳಿಯ ಜನರ ದೂರು.
ಪುರವರ ಹೋಬಳಿ ಆಡಳಿತಾತ್ಮಕವಾಗಿ ಮಧುಗಿರಿ ತಾಲ್ಲೂಕಿನಲ್ಲಿದ್ದರೂ, ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ. ಹಾಗಾಗಿ ಎರಡೂ ತಾಲ್ಲೂಕಿನ ಜನಪ್ರತಿನಿಧಿಗಳು ಕಡೆಗಣಿಸಿದ್ದಾರೆ ಎನ್ನುವುದು ಇಲ್ಲಿನ ಜನರ ಆರೋಪ.
ಇದು ಹೋಬಳಿ ಕೇಂದ್ರವಾಗಿದ್ದರೂ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ಕಂದಾಯ ಕಚೇರಿಗೆ ಒಳ್ಳೆಯ ಕಟ್ಟಡವಿಲ್ಲ. ಗ್ರಾಮ ಪಂಚಾಯಿತಿಯ ಹಳೆಯ ಚಿಕ್ಕ ಕಟ್ಟಡದಲ್ಲಿ ನಾಡಕಚೇರಿ ಕಾರ್ಯನಿರ್ವಹಿಸುತ್ತಿದೆ.
ನಾಡಕಚೇರಿ ಕಾರ್ಯಾಲಯ ಕೇವಲ 25X30 ಸುತ್ತಳತೆ ಜಾಗದಲ್ಲಿದ್ದು, ಅಲ್ಲಿ ಉಪ ತಹಶೀಲ್ದಾರ್, ಕಂದಾಯ ತನಿಖಾಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಕಂಪ್ಯೂಟರ್ ಆಪರೇಟರ್ ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ? ಹಾಗಾಗಿ ಪುರವರ ಗ್ರಾಮದ ಬ್ಯಾಲ್ಯ ರಸ್ತೆಯಲ್ಲಿರುವ ಕಂದಾಯ ತನಿಖಾಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಎಎನ್ಎಂ ಆರೋಗ್ಯ ಇಲಾಖೆಗೆಂದು ನಿರ್ಮಿಸಿರುವ ಮೂರು ಕಟ್ಟಡ ಪಾಳು ಬಿದ್ದು ಹಲವು ವರ್ಷ ಕಳೆದಿವೆ. ಸರ್ಕಾರ ಅವುಗಳನ್ನು ಕೆಡವಿ ಅಲ್ಲಿ ಅಗತ್ಯವಿರುವ ಇಲಾಖೆಗಳಿಗೆ ನೂತನ ಕಟ್ಟಡ ನಿರ್ಮಿಸಿ ಕಾರ್ಯನಿರ್ವಹಿಸಲು ಬಳಸಿಕೊಳ್ಳಬೇಕು ಎನ್ನುತ್ತಾರೆ ಪುರವರದ ಎ.ಎಂ. ಲಿಂಗರೆಡ್ಡಿ.
ಈ ಕ್ಷೇತ್ರದ ಶಾಸಕರು ಸಚಿವರಾಗಿದ್ದು, ಸರ್ಕಾರದಿಂದ ಅನುದಾನ ತಂದು ಪುರವರದಲ್ಲಿ ವಿವಿಧ ಇಲಾಖೆಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸುವುದರ ಜೊತೆಗೆ ಹೋಬಳಿಯನ್ನು ಅಭಿವೃದ್ಧಿಪಡಿಸಬೇಕು. ಅಧಿಕಾರಿಗಳು ಯಾವುದೇ ತಾರತಮ್ಯ ಮಾಡದೆ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಪುರವರ ಹೋಬಳಿಯ ಜನರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಮಧುಗಿರಿ ತಾಲ್ಲೂಕು ಕೇಂದ್ರ ಕೇವಲ 10 ಕಿ.ಮೀ ಅಂತರದಲ್ಲಿದ್ದರೂ ಪುರವರ ಹೋಬಳಿಯನ್ನು 23 ಕಿ.ಮೀ ಮೀಟರ್ ದೂರದಲ್ಲಿರುವ ಕೊರಟಗೆರೆ ವಿಧಾನಸಭಾ ಕೇತ್ರಕ್ಕೆ ಸೇರಿಸಿರುವುದರಿಂದ ಅನ್ಯಾಯವಾಗಿದೆ. ಇಬ್ಬರು ಜನಪ್ರತಿನಿಧಿಗಳಿಂದಲೂ ನಾವು ಪರಕೀಯರಂತಾಗಿದ್ದೇವೆಪಿ.ಕೆ.ರಂಗಸ್ವಾಮಿ ಕಸಾಪ ಹೋಬಳಿ ಘಟಕದ ಗೌರವಾಧ್ಯಕ್ಷ
ಪುರವರ ಹೋಬಳಿ ಕೇಂದ್ರವಾಗಿದ್ದರೂ ಅಭಿವೃದ್ದಿ ಮೂಲಸೌಕರ್ಯದಿಂದ ವಂಚಿತವಾಗಿ ಹಿಂದುಳಿದಿದೆ. ಸಚಿವ ಪರಮೇಶ್ವರ ಅವರನ್ನು ಭೇಟಿ ಮಾಡಿ ಸೌಕರ್ಯ ಕೈಗಾರಿಕೆ ಸ್ಥಾಪನೆಗೆ ಮನವರಿಕೆ ಮಾಡಲಾಗುವುದು.ರಾಜು ಕೋಡ್ಲಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.