ತಿಪಟೂರು: ತಾಲ್ಲೂಕಿನ ಕಿಬ್ಬನಹಳ್ಳಿ ಕ್ರಾಸ್ನ ರಂಭಾಪುರಿ ವಿದ್ಯಾಸಂಸ್ಥೆ ಆವರಣದಲ್ಲಿ ನೊಳಂಬ ಸ್ವಯಂಸೇವಕ ಸಂಘದಿಂದ ನೊಳಂಬ ಸಂಗಮ ತುಮಕೂರು ಜಾತ್ರೆ ಹಾಗೂ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಭಾನುವಾರ ನಡೆಯಿತು.
ತಮ್ಮಡಿಹಳ್ಳಿ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಕಿಬ್ಬನಹಳ್ಳಿ ಕ್ರಾಸ್ನಿಂದ ನಂದಿಧ್ವಜ ಕುಣಿತ, ವೀರಗಾಸೆ, ಬಸವ ನಡಿಗೆಯ ಮೂಲಕ ಮೆರವಣಿಗೆ ನಡೆಸಲಾಯಿತು. ನಾಲ್ಕುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಶಾಸಕ ಜ್ಯೋತಿಗಣೇಶ್ ಮಾತನಾಡಿ, ಶಿಕ್ಷಣ ಪಡೆದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ನೊಳಂಬ ಸಮಾಜದಿಂದ ನಡೆಯುವ ದೊಡ್ಡ ಕಾರ್ಯಕ್ರಮ ಒಗ್ಗಟ್ಟಿನ ಸಂಕೇತವಾಗಿದೆ ಎಂದರು.
ಮಾಜಿ ಶಾಸಕ ಕೆ.ಎಸ್ ಲಿಂಗೇಶ್ ಮಾತನಾಡಿ, ಇತಿಹಾಸದಲ್ಲಿ ನೊಳಂಬ ಸಮಾಜವು ರಾಜವಂಶಕ್ಕೆ ಸೇರಿದ್ದು, ಸಮಾಜವು ಶ್ರೇಷ್ಠರು ಅಗ್ರಮಾನ್ಯರು ಎಂದರ್ಥ. ಕೃಷಿ ಕೆಲಸವನ್ನು ಮಾಡಿಕೊಂಡು ಪಶುಪಾಲನೆ ಮಾಡಿಕೊಂಡು ಬಂದ ಜನಾಂಗವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿ ಎಂದು ತಂದೆ ತಾಯಿಗೆ ತಿಳಿಸಿ ತರಬೇತಿಗೆ ಮಕ್ಕಳನ್ನು ಸಿದ್ಧತೆ ಮಾಡಬೇಕು ಎಂದರು.
ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ ಮಾತನಾಡಿ, ನೊಳಂಬ ಸಮಾಜದಲ್ಲಿ 14 ಮಠಗಳಿದ್ದು ಎಲ್ಲಾ ಮಠಗಳನ್ನು ಸರಿಸಮಾನವಾಗಿ ಕಾಣಬೇಕಾಗಿದೆ. ಸಮಾಜದ ಬಗ್ಗೆ ಎಲ್ಲ ಸ್ವಾಮೀಜಿಗಳು ಚಿಂತಿಸಬೇಕಾಗಿದೆ. ಜಾತಿಗಣತಿಯ ಸಂದರ್ಭದಲ್ಲಿ ಧರ್ಮದ ಹೆಸರಿನಲ್ಲಿ ಲಿಂಗಾಯಿತ, ಜಾತಿಯಲ್ಲಿ ನೊಳಂಬರೆಂದು ನಮೂದಿಸಬೇಕು ಎಂದರು.
ಹಳೆಬೀಡು ಪುಷ್ಪಗಿರಿ ಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಗುಬ್ಬಿ ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ, ಅರಸೀಕೆರೆ ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ಗುರುಕುಲಾನಂದಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ, ಗೋಡೆಕೆರೆ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ಅರಸೀಕೆರೆ ಚಿದಾನಂದಶ್ರಮದ ಅಭಿನವ ಮುಖಂದೂರು ಬಸವಲಿಂಗ ಸ್ವಾಮೀಜಿ, ಶಾಸಕ ಕೆ.ಷಡಕ್ಷರಿ, ಸುಧಾಕರ್ ಹೆಬ್ಬಾಳು, ಚಿನ್ಮಯ್ ಚಿಗಟೇರಿ, ಸೌಮ್ಯ ಸುಧಾಕರ್, ರಾಯಸಂದ್ರ ರವಿಕುಮಾರ್, ಧನಂಜಯ, ಯಮುನಾ ಧರಣೇಶ್, ಪರಮೇಶ್ ನವಿಲೆ, ಸದಾಶಿವಯ್ಯ, ಶಶಿಧರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.