ತುಮಕೂರು: ಸರಕು ವಾಹನ ಖರೀದಿಸಲು ಸಾಲ ಕೊಟ್ಟ ಹಣಕಾಸು ಸಂಸ್ಥೆಗಳ (ಫೈನಾನ್ಸ್ ಕಂಪನಿ) ಕಿರುಕುಳ ತಪ್ಪಿಸಲು ಒತ್ತಾಯಿಸಿ ಲಾರಿ ಮಾಲೀಕರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದೇಶದಲ್ಲಿ ಉಂಟಾಗಿರುವ ಆರ್ಥಿಕ ಹಿಂಜರಿತ, ನೆರೆ ಹಾವಳಿಯಿಂದ ಸರಕು ಸಾಗಣೆ ವ್ಯವಹಾರ ಕುಸಿತ ಕಂಡಿದೆ. ಈ ಸಂದರ್ಭದಲ್ಲಿ ಸಾಲ ಕೊಟ್ಟ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಗೆ ಒತ್ತಡ ಹಾಕಿ ಕಿರುಕುಳ ನೀಡುತ್ತಿವೆ ಎಂದು ದೂರಿದರು.
ರೌಡಿಗಳನ್ನು ಬಿಟ್ಟು ದೌರ್ಜನ್ಯ ನಡೆಸಿ ಸಾಲ ವಸೂಲಿ ಮಾಡುತ್ತಿವೆ. ಲಾರಿ ಮಾಲೀಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಎಲ್ಲೆಂದರಲ್ಲಿ ಲಾರಿಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಕೂಡಲೇ ಈ ಕಿರುಕುಳ ತಪ್ಪಿಸಬೇಕು ಎಂದು ಮನವಿ ಮಾಡಿದರು.
ಇಲ್ಲದೇ ಇದ್ದರೆ ಲಾರಿಗಳನ್ನು ಜೀವನ ನಡೆಸುತ್ತಿರುವ ಮಾಲೀಕರು, ಚಾಲಕರು, ಕೆಲಸಗಾರರಿಗೆ ತೊಂದರೆಯಾಗಲಿದೆ. ಉದ್ಯೋಗವಂಚಿತರಾಗಿ ಬೀದಿಗೆ ಬರಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರಿಗೆ ಲಾರಿ ಮಾಲೀಕರ ಸಂಘದವತಿಯಿಂದ ಮನವಿ ಸಲ್ಲಿಸಿದರು.
ತುಮಕೂರು ನಗರ ಮತ್ತು ತಾಲ್ಲೂಕುಗಳ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಆರ್.ಅಬ್ದುಲ್ ಖಾದರ್, ಬಾಬಾಜಾನ್, ಮಹಮ್ಮದ್ ವಹೀದ್, ಯೂಸೂಫ್ ಪಾಷ, ಹಫೀಜ್, ವಾಜೀದ್, ಫಯಾಜ್, ಸೈಯದ್ ಶಬ್ಬೀರ್, ಹಫೀಸ್ ಪಾಷ, ಈಶ್ವರಯ್ಯ, ನಿಸಾರ್, ಬಾಬು, ವಸೀಂಖಾನ್, ಅನ್ವರ್, ಇಮ್ರಾನ್, ಸಮೀರ್ ಪಾಷ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.