ADVERTISEMENT

ತುಮಕೂರು | ಬಳ್ಳಾರಿ ಎಸ್‌.ಪಿ ಹೆಸರಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 5:31 IST
Last Updated 8 ಡಿಸೆಂಬರ್ 2025, 5:31 IST
ಸೈಬರ್‌ ಕ್ರೈಂ
ಸೈಬರ್‌ ಕ್ರೈಂ   

ತುಮಕೂರು: ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶೋಭಾ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ನಗರದ ಕುವೆಂಪು ನಗರದ ಎಲ್‌ಐಸಿ ಏಜೆಂಟ್‌ ಜಿ.ಎಸ್‌.ಜಗದೀಶ್‌ ಎಂಬುವರಿಗೆ ₹50 ಸಾವಿರ ವಂಚಿಸಲಾಗಿದೆ.

‘ಬಳ್ಳಾರಿ ಎಸ್‌.ಪಿ ಶೋಭಾ ಹೆಸರಿನ ಫೇಸ್‌ಬುಕ್‌ ಖಾತೆಯಿಂದ ದೀಪಕ್‌ ಪವಾರ್‌ ಎಂಬುವರ ಪರಿಚಯವಾಗಿತ್ತು. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್‌ಎಫ್‌) ಅಸಿಸ್ಟೆಂಟ್‌ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಬಳ್ಳಾರಿಗೆ ವರ್ಗಾವಣೆಯಾಗಿದೆ. ನಮ್ಮ ಮನೆಯಲ್ಲಿರುವ ಹಳೆಯ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವಂತೆ ತಿಳಿಸಿದ್ದರು. ನಂತರ ಅವರು ಕಳುಹಿಸಿದ್ದ ಕ್ಯೂಆರ್‌ ಕೋಡ್‌ ಸ್ಕ್ಯಾನರ್‌ಗೆ ₹50 ಸಾವಿರ ವರ್ಗಾವಣೆ ಮಾಡಿದ್ದೆ’ ಎಂದು ಜಗದೀಶ್‌ ಹೊಸ ಬಡಾವಣೆ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಇದಾದ ಬಳಿಕ ಎಸ್‌.ಪಿ ಶೋಭಾ ಅವರಿಗೆ ಮೆಸೇಜ್‌ ಮಾಡಿ ಈ ಬಗ್ಗೆ ವಿಚಾರಿಸಿದ್ದು, ಅವರು ಇದು ನಕಲಿ ಖಾತೆ ಎಂದು ತಿಳಿಸಿದ್ದರು. ಸಿಐಎಸ್‌ಎಫ್‌ ಅಧಿಕಾರಿ ಎಂದು ಹೇಳಿಕೊಂಡು ಮೆಸೇಜ್‌ ಮಾಡಿ ವಂಚಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚಿ, ಕ್ರಮಕೈಗೊಂಡು ಹಣ ವಾಪಸ್‌ ಕೊಡಿಸುವಂತೆ ಜಗದೀಶ್‌ ದೂರಿನಲ್ಲಿ ಮನವಿ ಮಾಡಿದ್ದಾರೆ.

ADVERTISEMENT
ಲಾಟರಿ ನೆಪದಲ್ಲಿ ಮೋಸ
‘ನೀವು ₹8 ಲಕ್ಷ ಕೇರಳ ಲಾಟರಿ ಬಹುಮಾನ ಗೆದ್ದಿದ್ದೀರಿ’ ಎಂದು ನಂಬಿಸಿ ನಗರ ಹೊರವಲಯ ಕುಂದೂರು ಗ್ರಾಮದ ಕೆ.ಮಂಜುನಾಥ್‌ ಎಂಬುವರಿಗೆ ₹87183 ಹಣ ವಂಚಿಸಲಾಗಿದೆ. ಡಿ. 1ರಂದು ಕರೆ ಮಾಡಿದ ಆರೋಪಿಗಳು ಲಾಟರಿ ಬಗ್ಗೆ ತಿಳಿಸಿದ್ದಾರೆ. ಮೊದಲಿಗೆ ಕಮಿಷನ್‌ ಎಂದು ₹8 ಸಾವಿರ ಪಡೆದಿದ್ದಾರೆ. ನಂತರ ಜಿಎಸ್‌ಟಿ ಕಟ್ಟಬೇಕು ಎಂದು ₹24785 ವರ್ಗಾಯಿಸಿಕೊಂಡಿದ್ದಾರೆ. ಇದಾದ ಬಳಿಕ ನಿಮ್ಮ ಖಾತೆಗೆ ₹8 ಲಕ್ಷ ಹಣ ಸಂದಾಯವಾಗಿದೆ ಪರಿಶೀಲಿಸುವಂತೆ ಸೂಚಿಸಿದ್ದಾರೆ. ಮಂಜುನಾಥ್‌ ಖಾತೆ ನೋಡಿದಾಗ ಹಣ ಪಾವತಿಯಾಗಿಲ್ಲ. ವಂಚಕರು ಹಣ ವರ್ಗಾವಣೆಗೆ ಎನ್‌ಒಸಿ ಪಡೆಯಬೇಕು ಎಂದು ನಂಬಿಸಿ ₹54398 ಹಾಕಿಸಿಕೊಂಡಿದ್ದಾರೆ. ಎಲ್ಲ ಪ್ರಕ್ರಿಯೆ ಮುಗಿದ ಮೇಲೆ ಮಂಜುನಾಥ್‌ ಆರೋಪಿಗಳಿಗೆ ಕರೆ ಮಾಡಿದ್ದು ಸರಿಯಾಗಿ ಸ್ಪಂದಿಸಿಲ್ಲ. ಮೋಸ ಹೋದ ವಿಷಯ ಅರಿವಿಗೆ ಬಂದ ನಂತರ ಕ್ಯಾತ್ಸಂದ್ರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.