ADVERTISEMENT

ಪ್ರವೇಶಾತಿ ಶುಲ್ಕ ಏರಿಕೆಗೆ ವಿರೋಧ

ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 16:31 IST
Last Updated 5 ಡಿಸೆಂಬರ್ 2021, 16:31 IST
ಎಂಜಿನಿಯರಿಂಗ್ ಪ್ರವೇಶಾತಿಯಲ್ಲಿ ಸರ್ಕಾರಿ ಕೋಟಾದಡಿಯ ಸೀಟುಗಳಿಗೆ ವಿಧಿಸಿರುವ ಹೆಚ್ಚಿನ ಶುಲ್ಕ ವಾಪಸ್ ಪಡೆಯುವಂತೆ ಆಗ್ರಹಿಸಿ ಎಐಡಿಎಸ್ಒ ಸಂಘಟನೆಯಿಂದ ತುಮಕೂರಿನಲ್ಲಿ ಪ್ರತಿಭಟನೆ ನಡೆಸಿತು. ಎಐಡಿಎಸ್‍ಒ ಜಿಲ್ಲಾ ಘಟಕದ ಅಧ್ಯಕ್ಷೆ ಅಶ್ವಿನಿ, ಜಿಲ್ಲಾ ಘಟಕದ ಕಾರ್ಯದರ್ಶಿ ಲಕ್ಕಪ್ಪ ಮತ್ತು ವಿದ್ಯಾರ್ಥಿಗಳು ಇದ್ದರು
ಎಂಜಿನಿಯರಿಂಗ್ ಪ್ರವೇಶಾತಿಯಲ್ಲಿ ಸರ್ಕಾರಿ ಕೋಟಾದಡಿಯ ಸೀಟುಗಳಿಗೆ ವಿಧಿಸಿರುವ ಹೆಚ್ಚಿನ ಶುಲ್ಕ ವಾಪಸ್ ಪಡೆಯುವಂತೆ ಆಗ್ರಹಿಸಿ ಎಐಡಿಎಸ್ಒ ಸಂಘಟನೆಯಿಂದ ತುಮಕೂರಿನಲ್ಲಿ ಪ್ರತಿಭಟನೆ ನಡೆಸಿತು. ಎಐಡಿಎಸ್‍ಒ ಜಿಲ್ಲಾ ಘಟಕದ ಅಧ್ಯಕ್ಷೆ ಅಶ್ವಿನಿ, ಜಿಲ್ಲಾ ಘಟಕದ ಕಾರ್ಯದರ್ಶಿ ಲಕ್ಕಪ್ಪ ಮತ್ತು ವಿದ್ಯಾರ್ಥಿಗಳು ಇದ್ದರು   

ತುಮಕೂರು: ಎಂಜಿನಿಯರಿಂಗ್ ಪ್ರವೇಶಾತಿಯಲ್ಲಿ ಸರ್ಕಾರಿ ಕೋಟಾದಡಿ ಸೀಟುಗಳಿಗೆ ವಿಧಿಸಿರುವ ಶುಲ್ಕ ಏರಿಕೆ ಆದೇಶವನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿ ನಗರದ ಖಾಸಗಿ ಬಸ್ ನಿಲ್ದಾಣದ ಹತ್ತಿರ ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.

ಎಐಡಿಎಸ್‍ಒ ಜಿಲ್ಲಾ ಘಟಕದ ಅಧ್ಯಕ್ಷೆ ಅಶ್ವಿನಿ ಮಾತನಾಡಿ ‘ಈಗಾಗಲೇ ವಿದ್ಯಾರ್ಥಿ ಸಮೂಹ ಕೊರೊನಾದಿಂದ ಅತ್ಯಂತ ಸಂಕಷ್ಟ ಎದುರಿಸಿದ್ದಾರೆ. ಹಲವರು ವಿದ್ಯಾಭ್ಯಾಸ ಬಿಟ್ಟು ಉದ್ಯೋಗದ ಕಡೆ ಮುಖ ಮಾಡಿದ್ದಾರೆ. ಜನಸಾಮಾನ್ಯರ ಆದಾಯ ಕೂಡ ಕುಂಠಿತವಾಗಿದೆ. ಇಂತಹ ಸಮಯದಲ್ಲಿ ಶುಲ್ಕ ಏರಿಕೆ ಮಾಡಿರುವುದು ಸಮಂಜಸವಲ್ಲ. ಸರ್ಕಾರ ಶುಲ್ಕ ಏರಿಕೆಯ ನಿರ್ಧಾರವನ್ನು ಹಿಂಪಡೆಯಬೇಕು ಹಾಗೂ ಕಾಲೇಜುಗಳಲ್ಲಿ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದನ್ನು ಕೂಡಲೇ ನಿಲ್ಲಿಸಲು ಆದೇಶ ನೀಡಬೇಕು’ ಎಂದರು.

ಎಐಡಿಎಸ್‍ಒ ಜಿಲ್ಲಾ ಘಟಕದ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, ಈ ವರ್ಷದ ಸರ್ಕಾರಿ ಕೋಟಾದಡಿ ಎಂಜಿನಿಯರಿಂಗ್ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ₹10 ಸಾವಿರದವರೆಗೆ ಶುಲ್ಕ ಏರಿಕೆ ಮಾಡಿರುವ ನಿರ್ಧಾರ ರಾಜ್ಯದ ವಿದ್ಯಾರ್ಥಿಗಳನ್ನು ಆತಂಕಕ್ಕೆ ತಳ್ಳಿದೆ. ಈಗಾಗಲೇ ದಾಖಲೆ ಪರಿಶೀಲನೆ ಪ್ರಕ್ರಿಯೆ ಮುಗಿದು, ಮೊದಲ ಸುತ್ತಿನ ಸೀಟು ಹಂಚಿಕೆ ಆಗಿದೆ. ಈಗ ಧಿಡೀರನೆ ಶುಲ್ಕ ಏರಿಕೆ ಮಾಡಿರುವುದು ವಿದ್ಯಾರ್ಥಿ ವಿರೋಧಿ ಮಾತ್ರವಲ್ಲ ಕಾನೂನು ಬಾಹಿರ ನಡೆ’ ಎಂದರು.

ADVERTISEMENT

ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಹತ್ತು ಘಂಟೆ ಅವಧಿಯಷ್ಟು ಪಾಠ ಮಾಡಬೇಕು ಎಂಬ ನಿರ್ಧಾರ, ಈಗಾಗಲೇ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕರನ್ನು ಮತ್ತಷ್ಟು ಒತ್ತಡಕ್ಕೆ ತಳ್ಳುತ್ತದೆ. ಹಾಗಾಗಿ ಈ ಮನವಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.