ADVERTISEMENT

ವೆಂಕಟರಮಣಪ್ಪ ವಿರುದ್ಧ ಆಕ್ರೋಶ

ಶಾಸಕರ ಕುಟುಂಬಕ್ಕೆ ಟಿಕೆಟ್ ನೀಡದಂತೆ ಕಾಂಗ್ರೆಸ್‌ ಮುಖಂಡರ ಬಿಗಿಪಟ್ಟು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 5:56 IST
Last Updated 27 ಡಿಸೆಂಬರ್ 2022, 5:56 IST
ತುಮಕೂರಿನಲ್ಲಿ ಸೋಮವಾರ ಪಾವಗಡ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ಮುಖಂಡರಾದ ಎಂ. ನಾಗೇಂದ್ರಪ್ಪ, ಗೋಪಾಲರೆಡ್ಡಿ, ಹೊದೆನಕಲ್ ಜಗನ್ನಾಥ್, ಕೋರ್ಟ್ ನರಸಪ್ಪ, ಮೈಲಾರರೆಡ್ಡಿ, ಹನುಮಂತರಾಯಪ್ಪ ಇತರರು ಇದ್ದಾರೆ
ತುಮಕೂರಿನಲ್ಲಿ ಸೋಮವಾರ ಪಾವಗಡ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ಮುಖಂಡರಾದ ಎಂ. ನಾಗೇಂದ್ರಪ್ಪ, ಗೋಪಾಲರೆಡ್ಡಿ, ಹೊದೆನಕಲ್ ಜಗನ್ನಾಥ್, ಕೋರ್ಟ್ ನರಸಪ್ಪ, ಮೈಲಾರರೆಡ್ಡಿ, ಹನುಮಂತರಾಯಪ್ಪ ಇತರರು ಇದ್ದಾರೆ   

ತುಮಕೂರು: ಪಾವಗಡ ಶಾಸಕ ವೆಂಕಟರಮಣಪ್ಪ ವಿರುದ್ಧ ಅಲ್ಲಿನ ಕಾಂಗ್ರೆಸ್ ಮುಖಂಡರು ಒಗ್ಗೂಡಿದ್ದು, ಶಾಸಕರು ಹಾಗೂ ಅವರ ಕುಟುಂಬದವರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಪಟ್ಟು ಹಿಡಿದಿದ್ದಾರೆ.

ಪಾವಗಡದ ಕಾಂಗ್ರೆಸ್ ಮುಖಂಡ ರಾದ ಎಂ. ನಾಗೇಂದ್ರಪ್ಪ, ಗೋಪಾಲ ರೆಡ್ಡಿ, ಹೊದೆನಕಲ್ ಜಗನ್ನಾಥ್, ಕೋರ್ಟ್ ನರಸಪ್ಪ, ಮೈಲಾರರೆಡ್ಡಿ, ಹನುಮಂತರಾಯಪ್ಪ, ತಮ್ಮಣ್ಣ, ನಾಗರಾಜ್, ಕೆಂಚಮಾರಯ್ಯ, ನರಸೀಯಪ್ಪ, ಕುಮಾರ್ ಮೊದ ಲಾದವರು ಸೋಮವಾರ ಜಂಟಿ ಪತ್ರಿಕಾ ಗೋಷ್ಠಿ ನಡೆಸಿ, ತಮ್ಮ ಬೇಡಿಕೆಯನ್ನು ಪಕ್ಷದ ನಾಯಕರ ಮುಂದಿಟ್ಟಿದ್ದಾರೆ.

ವೆಂಕಟರಮಣಪ್ಪ ವಿರುದ್ಧ ತಾಲ್ಲೂಕಿನ ಕಾಂಗ್ರೆಸ್‌ ನಾಯಕರು ಒಟ್ಟಾಗಿದ್ದೇವೆ. ಶಾಸಕ, ಅವರ ಪುತ್ರ ಸೇರಿದಂತೆ ಕುಟುಂಬಕ್ಕೆ ಟಿಕೆಟ್ ನೀಡಿದರೆ ಸೋಲಿಸುವುದು ಖಚಿತ. 38 ವರ್ಷಗಳಿಂದ ಒಂದೇ ಕುಟುಂಬಕ್ಕೆ ಸತತವಾಗಿ ಟಿಕೆಟ್ ಕೊಡಲಾಗುತ್ತಿದೆ. ಶಾಸಕರ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿರುವುದರಿಂದ ಟಿಕೆಟ್ ಕೊಡಬಾರದು ಎಂದರು.

ADVERTISEMENT

ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ಈಗ ಅರ್ಜಿ ಸಲ್ಲಿಸಿರುವ ಯಾರಿಗಾದರೂ ಟಿಕೆಟ್ ಕೊಡಬೇಕು. ನಮ್ಮ ವಿರೋಧ ಲೆಕ್ಕಿಸದೆ ಟಿಕೆಟ್ ಕೊಟ್ಟರೆ ಚುನಾವಣೆಯಲ್ಲಿ ಅವರ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಒಗ್ಗಟ್ಟು ‍ಪ್ರದರ್ಶಿಸಿದರು.

ಶಾಸಕರ ವಿರುದ್ಧ ವಾಗ್ದಾಳಿ ನಡೆಸಿ ದರು. ಪಕ್ಷಾಂತರಿ, ದುರಹಂಕಾರಿ, ಸ್ವಾರ್ಥ ರಾಜಕಾರಣಿಯನ್ನು ತಿರಸ್ಕರಿ ಸಲು ಕ್ಷೇತ್ರದ ಜನರು ಸಜ್ಜಾಗಿ ದ್ದಾರೆ. ಅದಕ್ಕೆ ಪಕ್ಷದ ನಾಯಕರು ಅವಕಾಶ ಮಾಡಿಕೊಡಬಾರದು ಎಂದರು.

ಶಾಸಕರು ತಾಲ್ಲೂಕಿನ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಪಾವಗಡ ತೀರ ಹಿಂದುಳಿಯುವಂತೆ ಮಾಡಿದ್ದಾರೆ. ಹಿಂದುಳಿದ ಕ್ಷೇತ್ರದ ಪ್ರಗತಿಗೆ ಬೇಕಾದ ಕನಿಷ್ಠ ಒಂದು ಶಿಕ್ಷಣ ಸಂಸ್ಥೆ ಸ್ಥಾಪನೆ ಪ್ರಯತ್ನ ನಡೆಸಲಿಲ್ಲ. ಕೈಗಾರಿಕೆಗಳನ್ನು ತರಲಿಲ್ಲ. ನೀರಾವರಿ ಸೌಲಭ್ಯ ಕಲ್ಪಿಸುವ ಪ್ರಯತ್ನ ಮಾಡಲಿಲ್ಲ. ತಾಲ್ಲೂಕಿನ ಅಭಿವೃದ್ಧಿ ಮರೆತು ತಮ್ಮ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ. ಗಣಿಗಾರಿಕೆ ಮೂಲಕ ಶ್ರೀಮಂತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಳೆದ ಮೂರು ದಶಗಳಿಂದಲೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಮೂಲೆಗುಂಪು ಮಾಡಿದ್ದಾರೆ. ಸ್ವಾರ್ಥ ರಾಜಕಾರಣಕ್ಕೆ ಪಕ್ಷ, ಕಾರ್ಯಕರ್ತರನ್ನು ಬಲಿ ಕೊಟ್ಟಿದ್ದಾರೆ. ಶಾಸಕ ಸ್ಥಾನದ ಜತೆಗೆ ಕೆಪಿಸಿಸಿ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲಾ ಪ್ರಮುಖ ಸ್ಥಾನಗಳನ್ನು ತಮ್ಮ ಕುಟುಂಬ ಹಾಗೂ ಸಮುದಾಯದವರಿಗೆ ನೀಡಿದ್ದಾರೆ ಎಂದು ದೂರಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಪುರಸಭೆ ಸೇರಿದಂತೆ ಇತರೆ ಕಡೆಗಳಲ್ಲಿ ಅಧಿಕಾರ ನೀಡುವ ಸಮಯದಲ್ಲಿ ಭೋವಿ ಸಮುದಾಯದವರಿಗೆ ಅವಕಾಶ ಕಲ್ಪಿಸಿದ್ದಾರೆ. ಇತರೆ ಸಮುದಾಯಗಳನ್ನು ಕಡೆಗಣಿಸಿದ್ದು, ಎಲ್ಲಾ ಸಮುದಾಯಗಳು ಇವರ ವಿರುದ್ಧ ನಿಂತಿವೆ ಎಂದು ಹೇಳಿದರು.

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು, ಪಕ್ಷದ ಇತರೆ ಪ್ರಮುಖರ ಸಭೆ ನಡೆಸಿ ಚರ್ಚಿಸಿದ್ದು, ವೆಂಕಟರಮಣಪ್ಪ ಕುಟುಂಬಕ್ಕೆ ಟಿಕೆಟ್ ಕೊಡದಂತೆ ಸಹಿ ಸಂಗ್ರಹಿಸಿದ್ದೇವೆ. ಈ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಪಕ್ಷದ ಪ್ರಮುಖ ನಾಯಕರಿಗೆ ತಿಳಿಸಿದ್ದೇವೆ. ಒಂದು ವೇಳೆ ಟಿಕೆಟ್ ನೀಡಿದರೆ ಅವರ ಪರವಾಗಿ ಕೆಲಸ ಮಾಡುವುದಿಲ್ಲ. ಸೋಲಿಗೆ ಕಾಂಗ್ರೆಸ್ ನಾಯಕರೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.