ಪಾವಗಡ: ತಾಲ್ಲೂಕಿನ ಅರಸೀಕೆರೆ ಗ್ರಾಮದ ಎಸ್ಬಿಐ ಬ್ಯಾಂಕ್ ಬಳಿಯಿರುವ ನೀರು ಸಂಗ್ರಹಣ ತೊಟ್ಟಿ(ಓವರ್ ಹೆಡ್ ಟ್ಯಾಂಕ್) ಶಿಥಿಲಾವಸ್ಥೆಯಲ್ಲಿದೆ. ಅವಘಡ ಸಂಭವಿಸುವ ಮುನ್ನ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದ ಎಸ್ಬಿಐ ಬ್ಯಾಂಕ್ ಬಳಿ ಇರುವ ಓವರ್ ಹೆಡ್ ಟ್ಯಾಂಕ್ ಶಿಥಿಲಾವಸ್ಥೆ ತಲುಪಿದೆ. ಸಧ್ಯ ಇದೇ ಟ್ಯಾಂಕ್ಗೆ ನೀರು ತುಂಬಿಸಿ ಗ್ರಾಮದ ವಿವಿಧ ಭಾಗಗಳಿಗೆ ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕ್ ಭರ್ತಿಯಾದಾಗ ಅವಘಡ ಸಂಭವಿಸಿದರೆ ಸಾಕಷ್ಟು ಅನಾಹುತ ನಡೆಯುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಟ್ಯಾಂಕ್ ಬಳಿ ಪಶು ಆಸ್ಪತ್ರೆ, ಎಸ್ಬಿಐ ಬ್ಯಾಂಕ್, ಹಾಲು ಉತ್ಪಾದನಾ ಸಂಘ, ಅಂಗನವಾಡಿ ಕೇಂದ್ರ, ಶುದ್ಧೀಕರಣ ಘಟಕ ಇದೆ. ಈ ಪ್ರದೇಶದಲ್ಲಿ ಸಾಕಷ್ಟು ಜನತೆ ಓಡಾಡುತ್ತಿರುತ್ತಾರೆ. ಶಿಥಿಲಗೊಂಡಿರುವ ಟ್ಯಾಂಕ್ ನೆಲಕಚ್ಚಿ ಜೀವಗಳಿಗೆ ಹಾನಿಯಾಗುವ ಮುನ್ನ ಮುಂಜಾಗ್ರತಾ ಕ್ರಮ ವಹಿಸುವ ಅಗತ್ಯವಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಇತ್ತೀಚೆಗೆ ಕೆರೆ ಅಂಗಳದಲ್ಲಿ ನಿರ್ಮಿಸಿರುವ ಟ್ಯಾಂಕ್ನಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ತಗ್ಗು ಪ್ರದೇಶದಲ್ಲಿರುವುದರಿಂದ ನೀರು ಸರಬರಾಜು ಮಾಡಲಾಗುತ್ತಿಲ್ಲ. ಈಗಿರುವ ಹಳೆಯ ಟ್ಯಾಂಕ್ ಬಳಿ ಹೊಸದಾಗಿ ತೊಟ್ಟಿ ನಿರ್ಮಿಸಿ ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್ ಅನ್ನು ನೆಲಸಮ ಮಾಡಿದ್ದರೆ ಅನುಕೂಲವಾಗುತ್ತಿತ್ತು ಎಂದು ಗ್ರಾಮದ ಪ್ರಮುಖರು ಸಮಸ್ಯೆ ಹೇಳಿಕೊಂಡರು.
ಓವರ್ ಹೆಡ್ ಟ್ಯಾಂಕ್ ಪಿಲ್ಲರ್ಗಳು ಹಾಳಾಗಿವೆ. ಕಬ್ಬಿಣ ತುಕ್ಕು ಹಿಡಿದು ಬೀಳುವ ಹಂತದಲ್ಲಿದೆ. ನೀರು ಸರಬರಾಜು ಮಾಡಲು ಬದಲಿ ವ್ಯವಸ್ಥೆ ಮಾಡಿ, ಹಾಳಾಗಿರುವ ಟ್ಯಾಂಕ್ ನೆಲಸಮ ಮಾಡುವ ತುರ್ತು ಇದೆ. ಅಧಿಕಾರಿಗಳು ಗಮನ ಹರಿಸದಿದ್ದರೆ ಮುಂದಾಗುವ ಅನಾಹುತಗಳಿಗೆ ಅವರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಗ್ರಾಮಸ್ಥ ದೊಡ್ಡಣ್ಣ ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.