ಶಿರಾ: ಭಾರತಕ್ಕೆ ಪಾಕಿಸ್ತಾನಕ್ಕಿಂತ ಚೀನಾ ದೊಡ್ಡ ಶತ್ರು. ಪಾಕಿಸ್ತಾನ ಕಿರಿಕಿರಿ ಮಾಡಿದರೆ ಚೀನಾ ನಮ್ಮ ದೇಶದ ಸುತ್ತ ಅವರಿಸಿಕೊಳ್ಳುತ್ತಿರುವುದು ಆತಂಕಕಾರಿ ಎಂದು ಕೆಪಿಸಿಸಿ ಮಾಧ್ಯಮ ಸಂವಹನ ವಿಭಾಗದ ಮುಖ್ಯಸ್ಥ ಬಿ.ಎಲ್.ಶಂಕರ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಪಾಕಿಸ್ತಾನದ ಮೇಲಿನ ಹೋರಾಟಕ್ಕೆ ರಾಷ್ಟ್ರೀಯ ಭಾವನೆಯ ಎನ್ನುತ್ತಾರೆ. ಆದರೆ ಚೀನಾ ವಿಚಾರದಲ್ಲಿ ಬಿಜೆಪಿ ಈ ಇದನ್ನು ಏಕೆ ಹೇಳುವುದಿಲ್ಲ ಎಂದು ಪ್ರಶ್ನಿಸಿದರು.
ಭಾವನಾತ್ಮಕ ವಿಚಾರಗಳನ್ನು ಹೆಚ್ಚಾಗಿ ಬಳಸಿಕೊಳ್ಳಲು ಕಾಂಗ್ರೆಸ್ ವಿಫಲವಾಗುತ್ತಿರುವುದರಿಂದ ಸೋಲು ಕಾಣುತ್ತಿದೆ. ಆದರೆ ಬಿಜೆಪಿ ಭಾವನಾತ್ಮಕ ವಿಚಾರದಿಂದಲೇ ಹೆಚ್ಚು ಮನ್ನನೆ ಪಡೆಯುತ್ತಿದೆ. ಜಾತೀಯತೆ ಮತ್ತು ಕೋಮವಾದದ ಮೇಲೆ ಚುನಾವಣೆ ನಡೆಯುವುದು ದುರಂತ. ಈಗ ಹಣ ಸಹ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದು ಆತಂಕಕಾರಿ ಎಂದರು.
ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಸ್ಪರ್ಧಿಸಲು ಇಷ್ಟವಿಲ್ಲದಿದ್ದರೂ ಬಲವಂತದಿಂದ ನಿಲ್ಲಿಸಿದ್ದಾರೆ. ಇವರು ಗೆದ್ದರೆ ಒಂದು ಸ್ಥಾನ ಜೆಡಿಎಸ್ಗೆ ಬರಬಹುದು ಆದರೆ ಇವರು ವಿಧಾನಸಭೆಯಲ್ಲಿ ನಿರೀಕ್ಷೆಯನ್ನು ಯಾವ ರೀತಿ ತುಂಬಲು ಸಾಧ್ಯ. ಅದೇ ರೀತಿ ಬಿಜೆಪಿ ಅಭ್ಯರ್ಥಿಗೆ ಅನುಭವದ ಕೊರತೆ ಇದೆ. ಇವರಿಂದ ಸಹ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರಿಗಿರುವ ಅನುಭವದಿಂದ ಹೆಚ್ಚಿನ ಲಾಭವಾಗುವುದು ಎಂದರು.
ಪ್ರವೃತ್ತಿಯಾಗಬೇಕಾದ ರಾಜಕಾರಣ ಇಂದು ವೃತ್ತಿಯಾಗುತ್ತಿದೆ. ಹೊಸದಾಗಿ ಬರುತ್ತಿರುವ ರಾಜಕಾರಣಿಗಳಿಗೆ ಸೇವೆ ಎನ್ನುವ ಪದ ಆರ್ಥವಿಲ್ಲದಂತಾಗಿರುವುದರಿಂದ ರಾಜಕಾರಣ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ ಎಂದರು.
ಜನರ ತೀರ್ಪಿಗೆ ಬೆಲೆ ನೀಡದೆ ಪ್ರಜಾ ಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿ ಶಾಸಕರನ್ನು ರಾಜೀನಾಮೆ ಕೊಡಿಸಿ ಸದನದಲ್ಲಿ ಬಹುಮತವನ್ನು ಪಡೆಯುವುದು ಎಷ್ಟು ಸೂಕ್ತ? ರಾಜೀನಾಮೆ ನೀಡಿದರು ಮತ್ತೇ ಚುನಾವಣೆ ಸ್ಪರ್ಧಿಸಿ ಅಧಿಕಾರ ನಡೆಸುವುದು ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲದಂತಾಗಿದೆ ಈ ಬಗ್ಗೆ ಪ್ರತಿಯೊಬ್ಬ ಪ್ರಜ್ಞಾವಂತರು ಯೋಚಿಸಬೇಕಾಗಿದೆ
ಎಂದರು.
ಶಿರಾ ಕ್ಷೇತ್ರದಲ್ಲಿ ಜಯಚಂದ್ರ ಅವರು ನಡೆಸಿರುವ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕು ಅವರು ಮಾಡಿರುವ ಕೆಲಸಗಳನ್ನು ನೋಡಿ ಮತದಾರರು ಮತ ನೀಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆರ್ಥ ಬರುವುದು ಎಂದರು.
ಸಂವಾದದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಮುಖಂಡ ಷಡಕ್ಷರಿ, ಹಲುಗುಂಡೇಗೌಡ, ಮಧುಸೂದನ್, ಮೆಹರೋಜ್ ಖಾನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.