ತುಮಕೂರು: ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ದಿಢೀರ್ ದಾಳಿ ನಡೆಸಿ ಎರಡು ಅಂಗಡಿಗಳಿಗೆ ಶನಿವಾರ ಬೀಗ ಹಾಕಿಸಿದರು.
ನಗರದ ಕೋತಿತೋಪು ಸೇರಿದಂತೆ ವಿವಿಧೆಡೆ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಟನ್ ಮತ್ತು ಚಿಕನ್ ಮಾರಾಟ ಮಾಡಲಾಗುತ್ತಿದೆ ಎಂದು ಪಾಲಿಕೆಗೆ ದೂರುಗಳು ಬಂದಿದ್ದವು. ಟಿ.ಭೂಬಾಲನ್, ಆರೋಗ್ಯಾಧಿಕಾರಿ ಡಾ. ನಾಗೇಶ್ಕುಮಾರ್, ಕೋತಿತೋಪಿನ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿದರು. ಅಲ್ಲಿ ಹೆಚ್ಚಿನ ಬೆಲೆಗೆ ಮಾಂಸ ಮಾರಾಟ ಮಾಡುತ್ತಿದದ್ದು ಬೆಳಕಿಗೆ ಬಂದಿತು.
‘ಮಹಾನಗರ ವ್ಯಾಪ್ತಿಯಲ್ಲಿ ಒಂದು ಕೆ.ಜಿ ಮಟನ್ ಅನ್ನು ₹ 500ಕ್ಕೆ ಮಾರಾಟ ಮಾಡಬೇಕು. ಆದರೆ ₹ 700ರಿಂದ 800ಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ವ್ಯಾಪಕ ದೂರುಗಳು ಬಂದಿವೆ’ ಎಂದು ಟಿ.ಭೂಬಾಲನ್ ತಿಳಿಸಿದರು.
ಮುಂದಿನ ದಿನಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಬೆಲೆಗೆ ಮಾಂಸ ಮಾರಾಟ ಮಾಡುತ್ತಿರುವುದು ಕಂಡು ಬಂದರೆ 1 ವರ್ಷ ಅಂಗಡಿಗಳ ಉದ್ದಿಮ ಪರವಾನಿಗೆ ರದ್ದುಪಡಿಸಲಾಗುವುದು. ಇದೇ ರೀತಿ ದಿನಸಿ, ತರಕಾರಿ, ಮೀನು ಮಾರಾಟದ ಬಗ್ಗೆ ದೂರುಗಳು ಬಂದರೆ ಅಂತಹ ಅಂಗಡಿಗಳ ಬಾಗಿಲು ಮುಚ್ಚಿಸಲಾಗುವುದು ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.