
ಪಾವಗಡ: ಆಹಾರ ಪದಾರ್ಥಗಳ ಮಾರಾಟಗಾರರು ಗ್ರಾಹಕರ ನಂಬಿಕೆ ಉಳಿಸಿಕೊಳ್ಳಬೇಕು ಎಂದು ಗ್ರೇಡ್– 2 ತಹಶೀಲ್ದಾರ್ ಪ್ರಸಾದ್ ತಿಳಿಸಿದರು.
ತಾಲ್ಲೂಕಿನ ನಿಡಗಲ್ ಹೋಬಳಿ ವಿ.ಎಚ್ ಪಾಳ್ಯದ ಸಮುದಾಯ ಭವನದಲ್ಲಿ ಬುಧವಾರ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯಿಂದ ಹಮ್ಮಿಕೊಂಡಿದ್ದ ಆಹಾರ ಅದಾಲತ್ನಲ್ಲಿ ಅವರು ಮಾತನಾಡಿದರು.
ಆಹಾರ ಅದಾಲತ್ನಲ್ಲಿ ಗ್ರಾಹಕ, ಅಧಿಕಾರಿಗಳು, ಮಾರಾಟಗಾರರು ಒಂದೇ ವೇದಿಕೆಯಲ್ಲಿದ್ದು ಕುಂದು ಕೊರತೆಗಳು ಇದ್ದರೆ ನ್ಯಾಯಯುತವಾಗಿ ಬಗೆಹರಿಸಿಕೊಳ್ಳಲು ಆಹಾರ ಅದಾಲತ್ ಒಂದು ವೇದಿಕೆಯಾಗಿದೆ. ಗ್ರಾಹಕರು ಆಹಾರ ಸಂಸ್ಕರಣಾ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು. ಕಲಬೆರಿಕೆ ಆಹಾರಗಳ ಬಗ್ಗೆ ಜಾಗೃತರಾಗಬೇಕು. ಇತ್ತೀಚೆಗೆ ಕಲಬೆರಿಕೆ ಹೆಚ್ಚಾಗುತ್ತಿದ್ದು ಅದನ್ನು ತಡೆಯುವ ನಿಟ್ಟಿನಲ್ಲಿ ಆಹಾರ ಅದಾಲತ್ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಆಹಾರ ಇಲಾಖೆ ಶಿರಸ್ತೆದಾರ್ ಶಶಿಕಲಾ, ಪಡಿತರ ಚೀಟಿಗಳ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಹೋಬಳಿ ಮಟ್ಟದಲ್ಲಿ ಆಹಾರ ಅದಾಲತ್ ಸಭೆ ಏರ್ಪಡಿಸಲಾಗಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ 75 ವರ್ಷದ ಮೇಲ್ಪಟ್ಟ ಏಕ ಸದಸ್ಯರಿರುವ ವಯೋವೃದ್ಧರಿಗೆ ಅವರ ಮನೆ ಬಾಗಿಲಿಗೆ ಪಡಿತರ ವಿತರಿಸಲು ‘ಅನ್ನ ಸುವಿಧಾ’ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ಹೊಸ ಪಡಿತರ ಚೀಟಿಗೆ 3,613 ಅರ್ಜಿ ಸ್ವಿಕೃತಗೊಂಡಿದ್ದು, 2,734 ಅರ್ಜಿ ವಿಲೇವಾರಿಯಾಗಿದೆ. ಅರ್ಹರಿಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದರು.
ಆಹಾರ ನಿರೀಕ್ಷಕ ರಘು, ಗ್ರಾಮ ಪಂಚಾಯತಿ ಅಧ್ಯಕ್ಷ ದಯಾನಂದ್, ವಿಎಸ್ಎಸ್ಎನ್ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.