ADVERTISEMENT

ತುಮಕೂರು: ‘ಪಿಎಂ ಮುದ್ರಾ’ ಹೆಸರಲ್ಲಿ ರೈತರಿಗೆ ವಂಚನೆ

₹3 ಲಕ್ಷ ಕಳೆದುಕೊಂಡ ರೈತ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 6:41 IST
Last Updated 16 ಅಕ್ಟೋಬರ್ 2025, 6:41 IST
ಸೈಬರ್‌
ಸೈಬರ್‌   

ತುಮಕೂರು: ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಾಲ ನೀಡುವುದಾಗಿ ನಂಬಿಸಿ ತಾಲ್ಲೂಕಿನ ನಂದಿಹಳ್ಳಿಯ ರೈತ ಎನ್‌.ಸಿ.ಶಿವರಾಜು ಎಂಬುವರಿಗೆ ₹3 ಲಕ್ಷ ವಂಚಿಸಲಾಗಿದೆ.

ಪಾರ್ಟ್‌ ಟೈಮ್‌ ಕೆಲಸ, ಕೊರಿಯರ್‌, ಡಿಜಿಟಲ್‌ ಅರೆಸ್ಟ್‌, ದುಪ್ಪಟ್ಟು ಹಣ ಗಳಿಕೆಯ ಆಮಿಷ ನೀಡಿ ಹಣ ವಂಚಿಸುತ್ತಿದ್ದ ಪ್ರಕರಣಗಳು ಹೆಚ್ಚುತ್ತಿದ್ದವು. ಈಗ ಸರ್ಕಾರದ ಯೋಜನೆಗಳ ಹೆಸರಿನಲ್ಲಿ ಲಿಂಕ್‌ ಕಳುಹಿಸಿ ವಂಚಿಸಲಾಗುತ್ತಿದೆ. ಸಾಲ ಕೊಡಲಾಗುವುದು ಎಂದು ರೈತರನ್ನು ಮರಳು ಮಾಡಲಾಗುತ್ತಿದೆ.

ಶಿವರಾಜು ಮುದ್ರಾ ಯೋಜನೆಯಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆಗ ಕೆಲ ಅಪರಿಚಿತರು ಕರೆ ಮಾಡಿ ಮಾತನಾಡಿದ್ದಾರೆ. ಕಂಪನಿಯ ಮ್ಯಾನೇಜರ್‌, ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾರೆ. ‘₹8 ಲಕ್ಷ ಸಾಲ ಮಂಜೂರು ಮಾಡುತ್ತಿದ್ದು, ಅದಕ್ಕೆ ನೀವು ಒಂದಷ್ಟು ಹಣ ಕಟ್ಟಬೇಕು’ ಎಂದು ತಿಳಿಸಿದ್ದಾರೆ. ಶಿವರಾಜು ಮೊದಲಿಗೆ ₹4,500 ಹಾಕಿದ್ದಾರೆ. ನಂತರ ಇಎಂಐ ಕಟ್ಟಬೇಕು ಎಂದು ಮತ್ತೊಂದಷ್ಟು ಹಣ ಹಾಕಿಸಿಕೊಂಡಿದ್ದಾರೆ.

ADVERTISEMENT

‘ನಿಮಗೆ ಸಾಲ ಮಂಜೂರಾಗಿದೆ ಅದಕ್ಕೆ ಮ್ಯಾನೇಜರ್‌ ಸಹಿ ಮಾಡಬೇಕು. ಅವರಿಗೆ ಲಂಚವಾಗಿ ₹10 ಸಾವಿರ ನೀಡುವಂತೆ’ ಸೈಬರ್‌ ವಂಚಕರು ಹೇಳಿದ್ದಾರೆ. ನಾನಾ ಕಾರಣ ಹೇಳಿ ಶಿವರಾಜು ಅವರಿಂದ ಒಟ್ಟು ₹3,00,541 ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಮೋಸ ಹೋದ ವಿಷಯ ಅರಿವಿಗೆ ಬಂದ ನಂತರ ‘ಸಾಲ ನೀಡುವುದಾಗಿ ವಂಚಿಸಿದವರನ್ನು ಪತ್ತೆ ಹಚ್ಚಿ, ಹಣ ವಾಪಸ್‌ ಕೊಡಿಸುವಂತೆ’ ಕೋರಿ ಕ್ಯಾತ್ಸಂದ್ರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.