ADVERTISEMENT

ಕ್ಷಮಿಸಿ, ಕೇಬಿ ವಾಕಿಂಗ್ ಹೋಗಿದ್ದಾರೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 10:22 IST
Last Updated 18 ಅಕ್ಟೋಬರ್ 2019, 10:22 IST
   

ಕೆ.ಬಿ.ಸಿದ್ದಯ್ಯ ಅವರನ್ನು ಸ್ಮರಿಸಿ ಹಿರಿಯ ರಂಗಕರ್ಮಿ ನಟರಾಜ ಹೊನ್ನವಳ್ಳಿ ಪದ್ಯ

ಕ್ಷಮಿಸಿ
ಕೇಬಿ ವಾಕಿಂಗ್
ಹೋಗಿದ್ದಾರೆ
ಇನ್ನೇನು
ಬರುತ್ತಾರೆ

ಉದ್ದಕೂ ಬಿದ್ದ
ಉಪ್ಪಾರಳ್ಳಿ
ರಸ್ತೆ
ಬಿಕೋ ಅನ್ನಿಸುತ್ತದೆ
ಕೇಬಿಯ
ಕಾಯುತ್ತಿದೆ
ವಾಪಸ್
ಬರುವವರೆಂದು
ಸರ್ಕಲ್‌ ಹೊಟೆಲಲ್ಲಿ
ಟೀ ಕುಡಿದು
'ಬನ್ ತಿಂತಿಯೇನೋ'
ಎಂದು
ಕೇಳುವವರೆಂದು.

ADVERTISEMENT

ವಾಕಿಂಗ್ ಹೋಗಿದ್ದಾರೆ
ಕೇಬಿ
ಇನ್ನೇನು ಬರುತ್ತಾರೆ

ಟೀಶರ್ಟ್ ಮೇಲೆ
ಕಾಕಾ
ಲುಂಗಿಗೆ ಇನ್ ಶರ್ಟ್
ಮಾಡಿ
ದಪ್ಪ ದಂಡ ಹಿಡಿದು
ಹೊಗಿದ್ದಾರೆ
ಕೇಬಿ
ಇನ್ನೇನು ಬರುತ್ತಾರೆ
ಈದಿನ
ಸ್ವಲ್ಪ ಲೇಟಾಗಬಹುದು
ಅಷ್ಟೇ...

ಅಲ್ಲಮನ ಜೊತೆ ಹೋಗಿದ್ದರೆ
ಮಾತ್ರ
ತಡವಾಗುತ್ತದೆ
ಮುಂದಣ ಹೆಜ್ಜೆಗಳನ್ನು ಅರಿಯದೇ
ಅಲ್ಲಿಂದ ಬರಲಾರರು
ಬರುವಾಗ
ಬಕಾಲ ಮುನಿಯ
ಕಂಡು
ಮಾತಾಡಿಸಿ ದಕ್ಲರ ಜೊತೆ
ಹೋಗಿ
ಗಲ್ಲೇಬಾನಿಯ ಆಳಕ್ಕಿಣುಕಿ
ಅಲ್ಲೇ
ನಿಂತುಬಿಟ್ಟರೋ
ಏನೋ?
ಯಾರಾದರೂ ಎಚ್ಚರಿಸಿ
ಕಳಿಸುವವರೆಗೆ
ನಾವೂ ಕಾಯಬೇಕು

ಇಲ್ಲಾ....
ಇಲ್ಲೆ ಎಲ್ಲೋ ತಿರುವಿನಲ್ಲಿ
ಇದ್ದಾರೆ
ಇನ್ನೇನು ಬರುತ್ತಾರೆ
ವಾಕಿಂಗ್
ಇಂದ ಕೇಬಿ.

–ನಟರಾಜ್‌ ಹೊನ್ನವಳ್ಳಿ, ರಂಗಕರ್ಮಿ

––

ಕುಟುಂಬದ ಸದಸ್ಯನಂತೆ ಇದ್ದ ಬಹುಕಾಲದ ಗೆಳೆಯ ಅಗಲಿರುವುದು ನೋವಿನ ಸಂಗತಿ. ರೈತ ಹಾಗೂ ದಲಿತ ಹೋರಾಟವನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕು ಎಂಬುದು ಅವರ ಆಸೆಯಾಗಿತ್ತು. ದಲಿತ ಹೋರಾಟದಲ್ಲಿ ಇದ್ದರೂ ಸಹ ರೈತ, ಕಾರ್ಮಿಕ ಹಾಗೂ ಇತರೆ ಹೋರಾಟಗಳನ್ನು ಬೆಸೆಯಬೇಕು ಎಂಬುದು ಅವರ ಆಸೆಯಾಗಿತ್ತು. ಸಂಕಷ್ಟದ ಕಾಲದಲ್ಲಿ ಸಿದ್ದಯ್ಯ ಅವರನ್ನು ಕಳೆದುಕೊಂಡಿರುವುದು ಬೇಸರದ ಸಂಗತಿ.

– ಪ್ರೊ.ದೊರೈರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.