ADVERTISEMENT

ಪುಣ್ಯ ಸ್ಮರಿಸಿದರು... ಪ್ರಸಾದ ಸ್ವೀಕರಿಸಿದರು...

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 15:29 IST
Last Updated 31 ಜನವರಿ 2019, 15:29 IST
ಸಿದ್ಧಗಂಗಾಮಠದಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು ಪ್ರಸಾದ ಸ್ವೀಕರಿಸಿದರು
ಸಿದ್ಧಗಂಗಾಮಠದಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು ಪ್ರಸಾದ ಸ್ವೀಕರಿಸಿದರು   

ತುಮಕೂರು: ಸಿದ್ಧಗಂಗಾಮಠದ ಅಂಗಳದಲ್ಲಿ ಎಲ್ಲಿಯೇ ನೋಡಿದರೂ ಭಕ್ತ ಸಮೂಹ. ಇವರಿಗಾಗಿಯೇ ಪ್ರಸಾದ ವ್ಯವಸ್ಥೆ ಮಾಡಿದ್ದ 11 ಕಡೆಗಳಲ್ಲಿ ಜನವೊ ಜನ.

ಇದು ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ದಿನವಾದ ಗುರುವಾರ ಕಂಡು ಬಂದ ನೋಟ. ಬೂಂದಿ, ಜಾಂಗೀರ, ಪಾಯಸ, ಅನ್ನ ಸಾಂಬಾರು, ಚಿತ್ರಾನ್ನ, ಮೊಸರನ್ನ, ತುಪ್ಪ, ಉಪ್ಪಿನಕಾಯಿ, ಪಲಾವ್, ಪಲ್ಯ ಪ್ರಸಾದವನ್ನು ಭಕ್ತರು ಸ್ವೀಕರಿಸಿದರು.

ಹನ್ನೊಂದು ಕಡೆ ಪ್ರಸಾದ ವ್ಯವಸ್ಥೆ ಮಾಡಿದ್ದರೂ ಎಲ್ಲ ಕಡೆಗೂ ಒಂದೇ ತರಹ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕೆಲವು ಅಡಿಕೆ ಪಟ್ಟಿ ತಟ್ಟೆ, ಕೆಲವು ಕಡೆ ಬಾಳೆ ಎಲೆ ಊಟ, ಕೆಲವು ಟೇಬಲ್ ಊಟ ಹೀಗೆ ಹಲವು ರೀತಿಯಲ್ಲಿ ಭಕ್ತರಿಗೆ ಅವರವರ ಅನುಕೂಲಕ್ಕೆ ತಕ್ಕಂತೆ (ಮಹಿಳೆಯರು, ವೃದ್ಧರು, ಕುಳಿತು, ನಿಂತು ಪ್ರಸಾದ ಸ್ವೀಕರಿಸಲು ಆಗದೇ ಇರುವವರಿಗೋಸ್ಕರ) ಭಕ್ತರು ಪ್ರಸಾದ ಸ್ವೀಕರಲು ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಮಠದ ಸಿಬ್ಬಂದಿ, ಶಿಕ್ಷಕರು, ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಘಟನೆ ಪ್ರತಿನಿಧಿಗಳು, ಭಕ್ತರು ವ್ಯವಸ್ಥೆಯಲ್ಲಿ ತೊಡಗಿದ್ದರು.
ಬೆಳಿಗ್ಗೆಯಿಂದ ಸಂಜೆಯವರೆಗೆ ಅಂದಾಜು 3 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ನಿಖರ ಅಂಕಿ ಅಂಶ ಲಭಿಸಿಲ್ಲ. ರಾತ್ರಿಯೂ ಪ್ರಸಾದ ವ್ಯವಸ್ಥೆ ಇರುವುದರಿಂದ ಭಕ್ತರು ಸ್ವೀಕರಿಸಲಿದ್ದಾರೆ ಎಂದು ಮಠದ ಆಡಳಿತ ಅಧಿಕಾರಿ ವಿಶ್ವನಾಥಯ್ಯ ಪ್ರಜಾವಾಣಿಗೆ ತಿಳಿಸಿದರು.

ನಗರದಲ್ಲೂ ಸ್ವಾಮೀಜಿ ಸ್ಮರಣೆ, ಪ್ರಸಾದ ವಿತರಣೆ: ನಗರದ ಪ್ರಮುಖ ರಸ್ತೆ, ಬಡಾವಣೆಗಳಲ್ಲೂ ಭಕ್ತರು ಸ್ವಾಮೀಜಿ ಪುಣ್ಯ ಸ್ಮರಣೆ ಪ್ರಯುಕ್ತ ಅನ್ನದಾಸೋಹ ನಡೆಸಿದರು. ಸಂಘ ಸಂಸ್ಥೆಗಳು, ಬಡಾವಣೆ ನಾಗರಿಕರು, ವ್ಯಾಪಾರಸ್ಥರು ಭಕ್ತರಿಗೆ ಪ್ರಸಾದ, ಪಾನಕ, ಮಜ್ಜಿಗೆ ವಿತರಿಸಿ ಶಿವಕುಮಾರ ಸ್ವಾಮೀಜಿಯವರು ಪ್ರತಿಪಾದಿಸಿದ ದಾಸೋಹ ಪರಂಪರೆ ಅರ್ಥಪೂರ್ಣವಾಗಿ ಅನುಸರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.