ತಿಪಟೂರು: ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಕೃಷಿ ಸಾಹಿತ್ಯ ಸಮ್ಮೇಳನದ ಆಯೋಜಿಸುವ ಬಗ್ಗೆ ಬುಧವಾರ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿತು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಯುವ ಪೀಳಿಗೆ ಕೃಷಿಯಿಂದ ವಿಮುಖವಾಗುತ್ತಿರುವ ಅಂಶ ಹಾಗೂ ರೈತರ ಸಮಸ್ಯೆಗಳಿಗೆ ಚಿಂತಿಸುವ, ಪರಿಹಾರ ಹುಡುಕುವ ನಿಟ್ಟಿನೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ, ರೈತರಿಗಾಗಿ ಶಿಬಿರ, ಕಾರ್ಯಗಾರಗಳನ್ನು ಆಯೋಜಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಪಹಣಿ, ಚಕ್ಕಬಂಧಿ, ಸರ್ವೆ ಮತ್ತಿತ್ತರ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ಹಂಚಿಕೆ ಕಾರ್ಯಕ್ರಮ ರೂಪಿಸುವ ಆಯಾಮವಾಗಿದೆ ಎಂದರು.
ರೈತ ಸಂಘದ ದೇವರಾಜ್ ತೀಮ್ಮಾಲಾಪುರ ಮಾತನಾಡಿ, ರೈತ ಕುಟುಂಬಗಳಿಗೆ ಹೆಣ್ಣು ಕೊಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಕೃಷಿಕ ಕುಟುಂಬಗಳ ಮಕ್ಕಳ ಮದುವೆ ಜಾಗತಿಕ ಸಮಸ್ಯೆಗಳಲ್ಲಿ ಸಿಲುಕಿದೆ. ಇದರ ಬಗ್ಗೆ ವಿಶೇಷ ಗಮನಹರಿಸಬೇಕಿದೆ ಎಂದರು.
ಸಭೆಯಲ್ಲಿ ತೆಂಗು, ಕೊಬ್ಬರಿಗೆ ಪ್ರಾಧಾನ್ಯ, ತೆಂಗಿನ ಜೊತೆ ಬೇರೆ ಬೇರೆ ಬೆಳೆಗಳನ್ನು ಬೆಳೆಯುವುದು, ರೈತರಿಗೆ ಸರ್ಕಾರದ ಸವಲತ್ತು, ಸಹಾಯಧನಗಳ ಬಗ್ಗೆ ಮಾಹಿತಿ ಹಂಚಿಕೆ, ಬೆಳೆಗಳಿಗೆ ತಗಲುವ ರೋಗ, ಮಾರುಕಟ್ಟೆ ವ್ಯವಸ್ಥೆ, ರಾಶಿ ಪೂಜೆ, ಹೊನ್ನಾರು ಮುಂತಾದವುಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಜಯನಂದಯ್ಯ, ಜಯಶರ್ಮಾ, ಸಿರಿಗಂಧ ಗುರು, ಚನ್ನಬಸವಣ್ಣ, ಶ್ರೀಕಾಂತ್ಕೆಳಹಟ್ಟಿ, ಕಸಾಪ ಕಾರ್ಯದರ್ಶಿ ಮಂಜಪ್ಪ, ಮಡೆನೂರು ಸೋಮಶೇಖರ್, ಬಸವರಾಜಪ್ಪ, ಕುಮಾರಸ್ವಾಮಿ, ದಿಬ್ಬನಹಳ್ಳಿ ಶ್ಯಾಮ್ಸುಂದರ್, ಭಾಸ್ಕರ್, ರಾಜಮ್ಮ, ಸುರೇಶ್, ಪ್ರಶಾಂತ್, ರೇಣುಕಾರಾಧ್ಯ, ಬೀರಸಂದ್ರ ಮೋಹನ್, ಗೋವಿಂದರಾಜು, ಸಿದ್ದಾಪುರ ದೇವಾನಂದ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.