ADVERTISEMENT

ಪಠ್ಯ ಪರಿಷ್ಕರಣೆಯಿಂದ ಒಂದು ಪೀಳಿಗೆ ನಾಶ: ಪ್ರೊ.ರವಿವರ್ಮ ಕುಮಾರ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 8:21 IST
Last Updated 17 ಜುಲೈ 2022, 8:21 IST
ತಿಪಟೂರು ಚಲೋ ಕಾರ್ಯಕ್ರಮದಲ್ಲಿ ಪ್ರೊ.ರವಿವರ್ಮ ಕುಮಾರ್‌ ಮಾತನಾಡಿದರು.
ತಿಪಟೂರು ಚಲೋ ಕಾರ್ಯಕ್ರಮದಲ್ಲಿ ಪ್ರೊ.ರವಿವರ್ಮ ಕುಮಾರ್‌ ಮಾತನಾಡಿದರು.   

ತುಮಕೂರು: ಪಠ್ಯಪುಸ್ತಕ ಪರಿಷ್ಕರಣೆಯಿಂದ ಒಂದು ಪೀಳಿಗೆಗೆ ನಾಶವಾಗುತ್ತಿದೆ. ಮಕ್ಕಳಿಗೆ ಅವಿದ್ಯೆ, ಅಶಾಂತಿ, ದ್ವೇಷ ಉಣಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರೊ.ರವಿವರ್ಮ ಕುಮಾರ್‌ ಕಿಡಿ ಕಾರಿದರು.

ನಗರದ ಬಿಜಿಎಸ್‌ ವೃತ್ತದಲ್ಲಿ ಭಾನುವಾರ ತಿಪಟೂರು ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪಠ್ಯಪುಸ್ತಕದ ಹೆಸರಲ್ಲಿ ರಾಜ್ಯದ ಉದ್ದಗಲಕ್ಕೂ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಹೋರಾಟ ಅನಿವಾರ್ಯವಾಗಿದೆ. ಒಬ್ಬ ಶಿಕ್ಷಕ ಕೆಟ್ಟವನಾದರೆ ಒಂದು ತರಗತಿಗೆ ಸಮಸ್ಯೆಯಾಗುತ್ತದೆ. ವೈದ್ಯ ತಪ್ಪು ಮಾಡಿದರೆ ರೋಗಿಗೆ ತೊಂದರೆಯಾಗಬಹುದು. ಆದರೆ, ಒಂದು ಪಠ್ಯಪುಸ್ತಕದಲ್ಲಿನ ಅನಗತ್ಯ ವಿಚಾರಗಳಿಂದ ಇಡೀ ಒಂದು ಪೀಳಿಗೆ ತಪ್ಪು ಹಾದಿಯತ್ತ ಸಾಗಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಪಠ್ಯಪುಸ್ತಕ ಸರ್ಕಾರದ ಶಿಶುವಲ್ಲ, ರೋಹಿತ್ ಚಕ್ರತೀರ್ಥರ ಶಿಶು. ಅದನ್ನು ಸರ್ಕಾರ ತನ್ನ ಶಿಶು ಎಂದು ಜನರ ಮೇಲೆ ಹೇರಲು ಹೊರಟಿದೆ. ಅನೇಕ ಚಿಂತಕರು, ಸಮಾಜದಲ್ಲಿ ಸಹಭಾಳ್ವೆ ಸಾರುವ ವ್ಯಕ್ತಿಗಳ ಪಠ್ಯ ತೆಗೆದು ಹಾಕಲಾಗಿದೆ. ರೋಹಿತ್‌ ಚಕ್ರತೀರ್ಥ ಸಮಿತಿಯ ಸಮಸ್ಯರೆಲ್ಲ ಆರ್‌‌ಎಸ್‌ಎಸ್ ಸಂಘಟನೆಯವರು ಮತ್ತು ಬ್ರಾಹ್ಮಣರು. ಅವರು ಬರೆದ ವಿಷಯಗಳನ್ನೇ ಪಠ್ಯದಲ್ಲಿ ಇಡಲಾಗಿದೆ ಎಂದು ದೂರಿದರು.

ADVERTISEMENT

ಸರ್ಕಾರ ಸುಳ್ಳಿನ ಸರಮಾಲೆಯ ಮೇಲೆ ನಡೆಯತ್ತಿದೆ. ಗೃಹಮಂತ್ರಿ, ಮುಖ್ಯಮಂತ್ರಿ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ. ಇಂದು ಪ್ರಜಾಪ್ರಭುತ್ವದ ಅರ್ಥ ಬದಲಾಗಿದೆ. ಬ್ರಾಹ್ಮಣರಿಂದ, ಬ್ರಾಹ್ಮಣರಿಗಾಗಿ, ಬ್ರಾಹ್ಮಣರಿಗೋಸ್ಕರ ಪಠ್ಯಪುಸ್ತಕ ಮಾಡಿರುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಂತಕ ಕೆ.ದೊರೈರಾಜ್‌,‘ಸರ್ಕಾರೇತರ ಸಂಸ್ಥೆ ಮಾಡಿರುವ ನೀತಿಯನ್ನು ಸಾರ್ವಜನಿಕರ ಮೇಲೆ ಹೇರುವ ಕೆಲಸ ಮಾಡುತ್ತಿದ್ದಾರೆ. ಇದನ್ನೆಲ್ಲಾ ಬದಿಗಿರಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವ ಹಾಗೆ ಮಾಡಬೇಕು’ ಎಂದು ಒತ್ತಾಯಿಸಿದರು.

ಲೇಖಕಿಯರಾದ ಬಾ.ಹ.ರಮಾಕುಮಾರಿ, ಬಿ.ಸಿ.ಶೈಲಾ ನಾಗರಾಜ್‌, ಸ್ಲಂ ಸಮಿತಿಯ ಅಧ್ಯಕ್ಷ ಎ.ನರಸಿಂಹಮೂರ್ತಿ, ಸಿಐಟಿಯು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌, ಪ್ರಧಾನ ಕಾರ್ಯದರ್ಶಿ ಎನ್‌.ಕೆ.ಸುಬ್ರಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.