ADVERTISEMENT

ವಿದ್ಯಾರ್ಥಿನಿ ಸಾವು ಪ್ರಕರಣ: ಖಾಸಗಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ

ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 11:39 IST
Last Updated 20 ಏಪ್ರಿಲ್ 2019, 11:39 IST
ಮಧು ಸಾವಿನ ತನಿಖೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಖಾಸಗಿ ಬಸ್ ನಿಲ್ದಾಣದ ಎದುರು ಪ್ರತಿಭಟಿಸಿದರು
ಮಧು ಸಾವಿನ ತನಿಖೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಖಾಸಗಿ ಬಸ್ ನಿಲ್ದಾಣದ ಎದುರು ಪ್ರತಿಭಟಿಸಿದರು   

ತುಮಕೂರು: ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಸಾಂಸ್ಕೃತಿಕ ಮಹಿಳಾ ಸಂಘಟನೆ (ಎಐಎಂಎಸ್ಎಸ್), ಮತ್ತು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ (ಎಐಡಿಎಸ್‌ಒ) ಮತ್ತು ಆವಿಷ್ಕಾರ ಸಂಘಟನೆ ಕಾರ್ಯಕರ್ತರು ನಗರದ ಖಾಸಗಿ ಬಸ್ ನಿಲ್ದಾಣದ ಎದುರು ಶನಿವಾರ ಪ್ರತಿಭಟಿಸಿದರು.

ಎಐಎಂಎಸ್ಎ ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ವಿ.ಕಲ್ಯಾಣಿ ಮಾತನಾಡಿ, ಈ ಪ್ರಕರಣ ಚುಣಾವಣೆಯ ಬಿಸಿಯಲ್ಲಿ ಮೂಲೆಗುಂಪು ಆಗಬಾರದು. ಮಧುಗೆ ನ್ಯಾಯ ಸಿಗಬೇಕು. ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮತ್ತು ಅತ್ಯಾಚಾರಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಎಲ್ಲದಕ್ಕೂ ಕಾರಣ ಅಶ್ಲೀಲ ಜಾಲತಾಣಗಳು ಮತ್ತು ಅಶ್ಲೀಲ ಜಾಹೀರಾತುಗಳು ಎಂದು ಮನೋವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಆದರೆ ಸರ್ಕಾರಗಳು ಇದಕ್ಕೆ ಕಡಿವಾಣ ಹಾಕಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೆಣ್ಣು ಮಕ್ಕಳ ಭದ್ರತೆಗೆ ಸೂಕ್ತ ಕ್ರಮ ವಹಿಸುತ್ತಿಲ್ಲ ಎಂದು ದೂರಿದರು.

ADVERTISEMENT

ಎಐಡಿಎಸ್‌ಒ ಸಂಘಟನೆ ಜಿಲ್ಲಾ ಸಂಘಟಕಿ ಅಶ್ವಿನಿ ಮಾತನಾಡಿ, ವಿದ್ಯಾರ್ಥಿನಿ ಪೋಷಕರು ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ದಾಖಲಿಸಲು ಮುಂದಾದಾಗ ಅವರು ಸಹಕರಿಸಿಲ್ಲ. ಪ್ರಕರಣವನ್ನು ಆತ್ಮಹತ್ಯೆ ಎಂದು ದೂಡಿದರು ಎಂದರು.

‘ಎಲ್ಲ ಸಾರ್ವಜನಿಕರು ಈ ನೊಂದ ವಿದ್ಯಾರ್ಥಿನಿಪೋಷಕರ ಪರ ಧ್ವನಿಯಾಗಿ ನಿಲ್ಲಬೇಕು. ವಿದ್ಯಾರ್ಥಿನಿ ನಮ್ಮ ಮಗಳು. ಆದ ಕಾರಣ ನಾವುಗಳು ಒಂದಾಗಿ ಅವಳಿಗೆ ನ್ಯಾಯ ಸಿಗುವವರೆಗೂ ಹೋರಾಡಬೇಕು. ಹೆಣ್ಣು ಮಕ್ಕಳಿಗೆ ಸೂಕ್ತ ಭದ್ರತೆ ಒದಗಿಸದ ಸರ್ಕಾರಗಳಿಗೆ ಧಿಕ್ಕಾರ. ಈ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯುವುದು’ ಎಂದು ಹೇಳಿದರು.

ಆವಿಷ್ಕಾರ ಸಂಘಟನೆಯ ಸಾಗರ್, ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಮಂಜುಳಾ ಗೋನವಾರ ಮಾತನಾಡಿ, ‘ಹೋರಾಟದ ಬಲದಿಂದ ಮಾತ್ರ ನ್ಯಾಯ ದೊರೆಯುತ್ತದೆ. ದಾನಮ್ಮ, ರಕ್ಷಿತಾ, ಆಸೀಫ, ನಿರ್ಭಯ ಮುಂತಾದ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರಗಳು ಯುವಪೀಳಿಗೆಯ ಹೋರಾಟಕ್ಕೆ ನಾಂದಿ ಆಗಿದೆ. ಮುಂದೆ ಈ ಹೋರಾಟದ ಕಿಡಿ ಎಲ್ಲೆಡೆ ಹರಡಲಿ’ ಎಂದು ಆಶಿಸಿದರು.

ಪ್ರತಿಭಟನೆಯಲ್ಲಿ ರತ್ನಮ್ಮ, ಲೇಖಕಿ ಪದ್ಮಾ ಕೃಷ್ಣಮೂರ್ತಿ, ಚೇತನ್, ಚುಕ್ಕಿ, ವೀರೇಶ್, ವನಜಾಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.