ADVERTISEMENT

ಕೊಡಿಗೇನಹಳ್ಳಿ: ಮೈದಾನಕ್ಕೆ ಜಾಗ ನೀಡದಿದ್ದರೆ ಪ್ರತಿಭಟನೆ

ಕೋಡ್ಲಾಪುರ ಗ್ರಾಮ ಪಂಚಾಯಿತಿಯ ತಾಳಕೆರೆ ಗ್ರಾಮಸ್ಥರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 5:08 IST
Last Updated 6 ಜನವರಿ 2021, 5:08 IST
ತಾಳಕೆರೆ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಶಾಲಾ ಮೈದಾನಕ್ಕೆ ಜಾಗ ಮಂಜೂರು ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು
ತಾಳಕೆರೆ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಶಾಲಾ ಮೈದಾನಕ್ಕೆ ಜಾಗ ಮಂಜೂರು ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು   

ಕೊಡಿಗೇನಹಳ್ಳಿ: ಪುರವರ ಹೋಬಳಿಯ ಕೋಡ್ಲಾಪುರ ಗ್ರಾಮ ಪಂಚಾಯಿತಿಯ ತಾಳಕೆರೆ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಾಣ ಹಾಗೂ ಸರ್ಕಾರಿ ಶಾಲಾ ಮೈದಾನಕ್ಕೆ ಜಾಗ ಮಂಜೂರು ಮಾಡಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಚಾರವಾಗಿ 2017ರಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಬಂದಿದ್ದ ತಹಶೀಲ್ದಾರ್‌ 15 ದಿನಗಳಲ್ಲಿ ಗ್ರಮದ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಹಲವು ವರ್ಷ ಕಳೆದರೂ ಭರವಸೆ ಈಡೇರದಿದ್ದರಿಂದ ಜನರು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಶಾಸಕರಿಗೆ ಮನವಿಯನ್ನು ನೀಡಿದ್ದರು.

ಅಧಿಕಾರಿಗಳು ಪ್ರತಿಭಟನೆ ಸಂದರ್ಭದಲ್ಲಿ ಮಾತ್ರ ಗ್ರಾಮಕ್ಕೆ ಬರುತ್ತಾರೆ. ವಾರದಲ್ಲಿ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸದಿದ್ದರೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರಾದ ಪುಟ್ಟಸ್ವಾಮಪ್ಪ, ಜಯರಾಮ್, ರಾಜಣ್ಣ, ನಾಗೇಶ್, ಶಶಿಧರ್, ಬಾಬು, ಗುಂಡಣ್ಣ, ನರಸಿಂಹಮೂರ್ತಿ, ಲಕ್ಷ್ಮಿಪತಿ, ನಂಜಪ್ಪ, ಹನುಮಂತರಾಯಪ್ಪ, ಸಂತೋಷ್ ಎಚ್ಚರಿಸಿದರು.

ADVERTISEMENT

‘ತಾಳಕೆರೆ ಗ್ರಾಮದ ಯೋಧ ಬೀಮೇಶ್ 30 ವರ್ಷಗಳಿಂದ ಬಿಎಸ್‌ಎಫ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಇತ್ತೀಚೆಗೆ ಕರೆ ಮಾಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಸಮಸ್ಯೆ ಬಗೆಹರಿಸುವ ಬಗ್ಗೆ ಗಡಿಯಲ್ಲಿರುವ ಸೈನಿಕರಿಗಿರುವ ಕಾಳಜಿ ಇಲ್ಲಿನ ಅಧಿಕಾರಿಗಳಿಗಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಹಂದ್ರಾಳು ನಾಗಭೂಷಣ್ ಹೇಳಿದರು.

ಸಾಮಾಜಿಕ ಕಾರ್ಯಕರ್ತ ಭಟ್ಟಗೆರೆ ರಾಮಾಂಜಿನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.