ತಿಪಟೂರು: ಬೆಲೆ ಏರಿಕೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಿಂಚಿತ್ತೂ ಕಾಳಜಿ ವಹಿಸದೆ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತಿವೆ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ಆರೋಪಿಸಿದ್ದಾರೆ.
ತಾಲ್ಲೂಕಿನ ಕರಡಿ ಗ್ರಾಮದಲ್ಲಿ ಕಾಂಗ್ರೆಸ್ ತಾಲ್ಲೂಕು ಘಟಕದಿಂದ ಬೆಲೆ ಏರಿಕೆ ಖಂಡಿ ‘100 ನಾಟ್ಔಟ್’ ಪ್ರತಿಭಟನೆಯಲ್ಲಿ ಮಾತನಾಡಿದರು.
ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿವೆ. ಕೊರೊನಾ ಸಂಕಷ್ಟದಿಂದ ಜನರು ಈಗಾಗಲೇ ಆರ್ಥಿಕವಾಗಿ ಕುಗ್ಗಿ ಹೋಗಿದ್ದು ಬೆಲೆ ಇಳಿಕೆ ಆಗದಿದ್ದರೆ ಆರ್ಥಿಕ ದಿವಾಳಿತನ ಕಟ್ಟಿಟ್ಟ ಬುತ್ತಿ ಎಂದರು.
ರಾಜ್ಯ ಸರ್ಕಾರಲ್ಲಿ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಮಾಡಲಾಗುತ್ತಿದೆ. ಸ್ವಪಕ್ಷಿಯರೇ ರಾಜ್ಯಭಾರ ಮಾಡಲು ಬಿಡದೇ ಗೊಂದಲ ಸೃಷ್ಟಿಸುತ್ತಿದ್ದಾರೆ. ರಾಜ್ಯದ ಹಿತ ಹೇಗೆ ಕಾಪಾಡಲು ಸಾಧ್ಯ. ‘ಅಚ್ಚೆದಿನ್ ಆಯೆಗಾ’ ಎನ್ನುತ್ತಿದ್ದ ಪ್ರಧಾನಿ ಬೆಲೆ ಏರಿಕೆ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಇದೀಗ ರಾಜ್ಯದ ಜನರಿಗೆ ಬಿಜೆಪಿ ಸರ್ಕಾರದ ನಡೆ ಬಗ್ಗೆ ಅರಿವಿಗೆ ಬಂದಿದ್ದು, ಇನ್ನಾದರೂ ಎಚ್ಚೆತ್ತುಕೊಂಡರೆ ಮಾತ್ರ ದೇಶವನ್ನು ಉಳಿಸಲು ಸಾಧ್ಯ ಎಂದರು.
ಮಾಜಿ ತಾ.ಪಂ.ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್ ಮಾತನಾಡಿ, ಒಂದು ಕಡೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಲಾಕ್ಡೌನ್ನಲ್ಲಿ ಕೆಲಸ ಇಲ್ಲದೇ ಜನ ಕಂಗಾಲಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಬಿಜೆಪಿ ಸ್ಥಗಿತಗೊಳಿಸಿ ರಾಜ್ಯದ ಜನರಿಗೆ ನೀಡುತ್ತಿದ್ದ ಸೌಕರ್ಯ ನಿಲ್ಲಿಸಿ ತೆರಿಗೆ ರೂಪದಲ್ಲಿ ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರಡಿ ಗ್ರಾ.ಪಂ.ಸದಸ್ಯ ಮುನಿರಾಜು, ಗಂಗಮ್ಮ, ಮುಖಂಡರಾದ ಶಿವಯ್ಯ, ಹರೀಶ್, ಕುಮಾರ್ ಶೆಟ್ಟಿಹಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.