ADVERTISEMENT

ತುಮಕೂರು: ದಿನಪೂರ್ತಿ ಕಾಡಿದ ಸೋನೆ ಮಳೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 5:59 IST
Last Updated 20 ಜುಲೈ 2024, 5:59 IST
ತುಮಕೂರಿನಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ಸಾರ್ವಜನಿಕರು ಕೊಡೆ ಹಿಡಿದು ಸಾಗಿದರು
ತುಮಕೂರಿನಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ಸಾರ್ವಜನಿಕರು ಕೊಡೆ ಹಿಡಿದು ಸಾಗಿದರು    

ತುಮಕೂರು: ನಗರ ಹಾಗೂ ಜಿಲ್ಲೆಯ ವಿವಿಧೆಡೆ ಶುಕ್ರವಾರ ಇಡೀ ದಿನ ಸುರಿದ ಸೋನೆ ಮಳೆ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು, ಕೆಲಸದ ನಿಮಿತ್ತ ತೆರಳುವ ನೌಕರರನ್ನು ಫಜೀತಿಗೆ ಸಿಲುಕಿಸಿತು.

ಬೆಳಗಿನ ಜಾವ ಆರಂಭವಾದ ಜಿಟಿ ಜಿಟಿ ಮಳೆ ಸಂಜೆಯ ತನಕ ತೊಟ್ಟಿಕ್ಕುತ್ತಲೇ ಇತ್ತು. ನಗರದ ಜನತೆ ಕೊಡೆ ಹಿಡಿದು ಮನೆಯಿಂದ ಆಚೆ ಬರುತ್ತಿದ್ದರು. ಕೆಲಸಕ್ಕಾಗಿ ನಗರದತ್ತ ಬರುವವರು ಕೊಡೆಗಳನ್ನು ಆಶ್ರಯಿಸಿದ್ದರು. ಬೈಕ್‌ ಸವಾರರು ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು. ಬೀದಿ ಬದಿ ವ್ಯಾಪಾರಿಗಳ ದೈನಂದಿನ ಕೆಲಸಕ್ಕೆ ಮಳೆ ಅಡ್ಡಿಯಾಯಿತು. ಸೋನೆ ಜೋರಾಗಬಹುದು, ನಿಲ್ಲಬಹುದು ಎಂದು ಕಾದು ಕುಳಿತವರು ನಿರಾಸೆ ಅನುಭವಿಸಬೇಕಾಯಿತು.

ಇಡೀ ದಿನ ಸುರಿದ ಮಳೆಯಿಂದ ನಗರದ ಜೂನಿಯರ್‌ ಕಾಲೇಜು ಮೈದಾನ ಕೆಸರುಗದ್ದೆಯಂತಾಗಿತ್ತು. ವಿದ್ಯಾರ್ಥಿಗಳು ಕಾಲಿಡಲು ಜಾಗವಿಲ್ಲದೆ ಪರದಾಡಿದರು. ಎಚ್ಚರ ತಪ್ಪಿದರೆ ಜಾರಿ ಬೀಳಬಹುದು ಎಂದು ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ಸಾಗುತ್ತಿದ್ದರು. ಸದಾ ವಿದ್ಯಾರ್ಥಿಗಳಿಂದ ತುಂಬಿರುತ್ತಿದ್ದ ಪ್ರದೇಶ ಖಾಲಿ ಖಾಲಿಯಾಗಿತ್ತು. ಬೆಳಗ್ಗೆಯಿಂದ ಚಳಿಯ ವಾತಾವರಣ ಇದ್ದರಿಂದ ಸಾರ್ವಜನಿಕರು ಬೆಚ್ಚಗಿನ ಉಡುಪಿನ ಮೊರೆ ಹೋಗಿದ್ದರು.

ADVERTISEMENT

‘ಮಳೆ ಚುರುಕುಗೊಂಡರೆ ಮುಂಗಾರು ಬಿತ್ತನೆ ಶುರು ಮಾಡಬಹುದು’ ಎಂಬ ಯೋಜನೆಯಲ್ಲಿದ್ದ ರೈತರನ್ನು ಜಡಿ ಮಳೆ ಸಂಕಷ್ಟಕ್ಕೆ ತಳ್ಳಿದೆ. ಮಳೆ ಬೀಳುವುದು ನಿಲ್ಲುತ್ತಿಲ್ಲ, ಭೂಮಿಗೂ ನೀರು ಇಳಿಯುತ್ತಿಲ್ಲ ಎಂಬಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.