ADVERTISEMENT

ಮಕ್ಕಳಿಗೆ ರಾಜ್‌ ಅಭಿನಯದ ಚಿತ್ರ ತೋರಿಸಿ

ಡಾ.ರಾಜ್‌ಕುಮಾರ್ ಅವರ 91ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 17:18 IST
Last Updated 24 ಏಪ್ರಿಲ್ 2019, 17:18 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಡಾ.ರಾಜ್‌ಕುಮಾರ್ ಜನ್ಮದಿನ ಕಾರ್ಯಕ್ರಮವನ್ನು ಡಾ.ಕೆ.ರಾಕೇಶ್‌ಕುಮಾರ್ ಉದ್ಘಾಟಿಸಿದರು. ಕೆ.ಚನ್ನಬಸಪ್ಪ ಹಾಗೂ ಅಧಿಕಾರಿಗಳು ಇದ್ದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಡಾ.ರಾಜ್‌ಕುಮಾರ್ ಜನ್ಮದಿನ ಕಾರ್ಯಕ್ರಮವನ್ನು ಡಾ.ಕೆ.ರಾಕೇಶ್‌ಕುಮಾರ್ ಉದ್ಘಾಟಿಸಿದರು. ಕೆ.ಚನ್ನಬಸಪ್ಪ ಹಾಗೂ ಅಧಿಕಾರಿಗಳು ಇದ್ದರು.   

ತುಮಕೂರು: ಕರ್ನಾಟಕ ರತ್ನ, ಪದ್ಮಭೂಷಣ, ವರನಟ ಡಾ.ರಾಜ್‌ಕುಮಾರ್ ಅವರ ನಟನೆಯ ಚಲನಚಿತ್ರಗಳನ್ನು ಮಕ್ಕಳಿಗೆ ತೋರಿಸಬೇಕು. ಆ ಚಿತ್ರಗಳಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಅವರು ತಿಳಿಸಿದರು.

ವರನಟ ಡಾ.ರಾಜ್‌ಕುಮಾರ್ ಅವರ 91ನೇ ಜನ್ಮದಿನದ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

’ರಾಜ್‌ಕುಮಾರ್ ಅವರು ನಟಿಸಿರುವ ಪ್ರತಿ ಚಲನಚಿತ್ರದಲ್ಲಿ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ತನ್ಮಯತೆ, ಶ್ರದ್ಧೆ ಅವರಲ್ಲಿತ್ತು. ಸಕಾರಾತ್ಮಕ ಅಥವಾ ನಕಾರಾತ್ಮಕ ಪಾತ್ರದಲ್ಲಿ ನಟಿಸುವಾಗಲೂ ಆ ಪಾತ್ರಗಳಿಗೆ ತಕ್ಕಂತೆ ಮನೋಜ್ಞವಾಗಿ ಅಭಿನಯಿಸುತ್ತಿದ್ದರು’ ಎಂದು ಹೇಳಿದರು.

ADVERTISEMENT

‘ಭೂಕೈಲಾಸ’ ಹಾಗೂ ‘ಭಕ್ತ ಪ್ರಹ್ಲಾದ’ ಚಲನಚಿತ್ರಗಳಲ್ಲಿ ಡಾ.ರಾಜ್ ಅವರ ನಟನೆಯನ್ನು ಜಿಲ್ಲಾಧಿಕಾರಿ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ‘ಹಿರಣ್ಯಕಶಿಪು’, ‘ಭಕ್ತ ಕನಕದಾಸ’, ‘ಭಕ್ತ ಕುಂಬಾರ’ ಕುರಿತಂತೆ ಪೌರಾಣಿಕ ಹಾಗೂ ಐತಿಹಾಸಿಕ ಪುಸ್ತಕಗಳನ್ನು ಓದುವಾಗ ಡಾ.ರಾಜ್‌ಕುಮಾರ್ ಅವರು ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ. ಇದು ಅವರ ನಟನೆಯಲ್ಲಿ ಇದ್ದ ತನ್ಮಯತೆ, ಬದ್ಧತೆ, ಶ್ರದ್ಧೆಯನ್ನು ತೋರಿಸುತ್ತದೆ’ ಎಂದರು.

’ಅಭಿಮಾನಿಗಳನ್ನೇ ದೇವರು ಎನ್ನುತ್ತಿದ್ದರು. ಚಿತ್ರ ನಿರ್ಮಾಪಕರನ್ನು ಅನ್ನದಾತರು ಎಂದು ಗೌರವದಿಂದ ಕರೆಯುತ್ತಿದ್ದರು. ಇಂತಹ ಸರಳತೆ, ಸಜ್ಜನಿಕೆಯ ವ್ಯಕ್ತಿತ್ವ ಹಾಗೂ ಅವರ ನಟನೆಯ ಚಲನಚಿತ್ರಗಳಲ್ಲಿನ ಮೌಲ್ಯಗಳು ಮುಂದಿನ ಪೀಳಿಗೆಗೆ ಆದರ್ಶವಾಗಬೇಕು’ ಎಂದು ತಿಳಿಸಿದರು.

ಮಧುಗಿರಿ ಉಪವಿಭಾಗಾಧಿಕಾರಿ ಶಿಲ್ಪಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಜಿ.ಪಿ. ದೇವರಾಜ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಡಾ.ಸುಬ್ರ ನಾಯ್ಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಅಪ್ಪಿನಕಟ್ಟೆ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ರಾಜ್‌ಕುಮಾರ್ ಅಭಿಮಾನಿಗಳು ಭಾಗವಹಿಸಿದ್ದರು.

ಕಲಾವಿದ ದಿಬ್ಬೂರು ಮಂಜು ಅವರು ಡಾ.ರಾಜ್‌ಕುಮಾರ್ ಗಾಯನದ ಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.