ತುಮಕೂರಿನಲ್ಲಿ ಭಾನುವಾರ ಉಪ್ಪಾರಹಳ್ಳಿ ಒಕ್ಕಲಿಗರ ಸಂಘದಿಂದ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ತುಮಕೂರು: ಜಾತಿ ಜನಗಣತಿ ವೇಳೆ ಪ್ರಧಾನವಾಗಿ ‘ಒಕ್ಕಲಿಗ’ ಎಂದು ನಮೂದಿಸಿ, ಉಪ ಜಾತಿ ಕಾಲಂನಲ್ಲಿ ತಮ್ಮ ಉಪ ಜಾತಿಯನ್ನೂ ನೋಂದಾಯಿಸಬೇಕು ಎಂದು ಕುಣಿಗಲ್ನ ಅರೇಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ ಸಲಹೆ ಮಾಡಿದರು.
ನಗರದಲ್ಲಿ ಭಾನುವಾರ ಉಪ್ಪಾರಹಳ್ಳಿ ಒಕ್ಕಲಿಗರ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರದ ಹಂತದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಒಕ್ಕಲಿಗರು ಗಮನಹರಿಸುವುದಿಲ್ಲ. ಸಂಘಟನೆಗಳು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರದ ಸವಲತ್ತು ಕುರಿತು ಮಾಹಿತಿ ಒದಗಿಸಬೇಕು. ಒಕ್ಕಲಿಗರೆಲ್ಲ ಒಂದೇ, ಅದರೊಳಗೆ ಉಪಜಾತಿಗಳ ಭೇದ ಬೇಡ. ಗಣತಿ ವೇಳೆ ಉಪ ಜಾತಿ ನೋಂದಣಿ ಮಾಡಿದರೆ ಸವಲತ್ತು ಪಡೆಯಲು ನೆರವಾಗುತ್ತದೆ ಎಂದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ‘ಪಠ್ಯ ಓದಿ ಹೆಚ್ಚು ಅಂಕ ಪಡೆದು ಪ್ರತಿಭಾವಂತರಾದರೆ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯವಿಲ್ಲ. ವ್ಯಕ್ತಿತ್ವ ವಿಕಸನಕ್ಕೆ ವಿದ್ಯೆ ಹಾಗೂ ಸಂಸ್ಕಾರ ಎರಡೂ ಮುಖ್ಯ. ವಿದ್ಯೆ ಜತೆಗೆ ಸಂಸ್ಕಾರವನ್ನೂ ಕಲಿಸಬೇಕು. ಮಕ್ಕಳಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸಬೇಕು. ಕಲಿಕೆ ಹಾಗೂ ಸಾಧನೆ ನಿರಂತರವಾಗಿರಬೇಕು’ ಎಂದು ಸಲಹೆ ಮಾಡಿದರು.
ರಾಜ್ಯ ಒಕ್ಕಲಿಗರ ಸಂಘದ ಸಹ ಕಾರ್ಯದರ್ಶಿ ಹನುಮಂತರಾಯಪ್ಪ, ‘ಒಕ್ಕಲಿಗರ ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಕೆಜಿಯಿಂದ ಉನ್ನತ ಶಿಕ್ಷಣದ ವರೆಗೆ ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಘ ವಿಶೇಷ ಆಸಕ್ತಿ ವಹಿಸಿದೆ. ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ವಿತರಿಸಲಾಗುತ್ತಿದೆ’ ಎಂದು ತಿಳಿಸಿದರು.
ಉಪ್ಪಾರಹಳ್ಳಿ ಒಕ್ಕಲಿಗರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಜಿ.ಟಿ.ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಸಿದ್ಧರಾಜುಗೌಡ, ಸಹ ಕಾರ್ಯದರ್ಶಿ ಕುಮಾರ್ ಉಪ್ಪಾರಹಳ್ಳಿ, ಸಂಘಟನಾ ಕಾರ್ಯದರ್ಶಿ ಡಿ.ವಿ.ಶ್ರೀನಿವಾಸ್, ಖಜಾಂಚಿ ಬಿ.ಸಿ.ಧನಂಜಯ, ಭೈರವೇಶ್ವರ ಬ್ಯಾಂಕ್ ಅಧ್ಯಕ್ಷ ಟಿ.ಆರ್.ಚಿಕ್ಕರಂಗಣ್ಣ, ಮುಖಂಡರಾದ ಬೋರೇಗೌಡ, ನಾಗಣ್ಣ, ಲಕ್ಕೇಗೌಡ, ಭೈರವ ಗಿರೀಶ್, ವಿಜಯಕುಮಾರ್, ಟಿ.ಆರ್.ನಾಗರಾಜು, ಪುಟ್ಟಸ್ವಾಮಿ, ಮಂಜುನಾಥ್, ದೊಡ್ಡಶಾನಯ್ಯ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.