ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ ಕಂದಾಯ ಗ್ರಾಮ, ಉಪಗ್ರಾಮ, ಬಡಾವಣೆ ರಚನೆ ಬಗ್ಗೆ ಒಂದು ವಾರದಲ್ಲಿ ಪ್ರಸ್ತಾವ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಇಲ್ಲಿ ಮಂಗಳವಾರ ನಿರ್ದೇಶಿಸಿದರು.
ಕಂದಾಯ ಇಲಾಖೆ, ಜಿಲ್ಲಾ ಪಂಚಾಯಿತಿ, ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಸಹಯೋಗದಲ್ಲಿ ಕಂದಾಯ ಗ್ರಾಮ, ಉಪಗ್ರಾಮ ಹಾಗೂ ಬಡಾವಣೆ ರಚನೆ ಸಂಬಂಧ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
50ಕ್ಕೂ ಹೆಚ್ಚಿನ ಸಂಖ್ಯೆಯ ಮನೆಗಳು ಅಥವಾ 250ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದರೆ ಕಂದಾಯ ಗ್ರಾಮವನ್ನಾಗಿ ಗುರುತಿಸಬೇಕು. ಇಂತಹ ಗ್ರಾಮ ಮೂಲ ಗ್ರಾಮದಿಂದ 1 ಕಿ.ಮೀ ಅಂತರದಲ್ಲಿ ಇರಬೇಕು. 10ಕ್ಕೂ ಅಧಿಕ, 50ಕ್ಕಿಂತ ಕಡಿಮೆ ಮನೆಗಳನ್ನು ಹೊಂದಿರುವ ಹಾಗೂ ಕಂದಾಯ ಗ್ರಾಮವಾಗಲು ಅರ್ಹವಲ್ಲದ ಜನವಸತಿ ಪ್ರದೇಶವನ್ನು ಉಪ ಗ್ರಾಮವನ್ನಾಗಿ ಪರಿಗಣಿಸಿ ಪ್ರಸ್ತಾವ ಸಲ್ಲಿಸಬೇಕು ಎಂದು ತಿಳಿಸಿದರು.
ಕಂದಾಯ ಇಲಾಖೆ ಆಯುಕ್ತಾಲಯದ ತಹಶೀಲ್ದಾರ್ ಗಣಪತಿಶಾಸ್ತ್ರಿ, ಕಂದಾಯ ಗ್ರಾಮ ರಚನೆಯ ಕಾಯ್ದೆ, ನಿಯಮ, ಉಪ ಗ್ರಾಮಗಳಿಗಿರಬೇಕಾದ ಅರ್ಹತೆ, ಪ್ರಸ್ತಾವ ತಯಾರಿಕೆ, ಕಂದಾಯ ಗ್ರಾಮಗಳನ್ನಾಗಿ ಮಾಡುವ ಮುನ್ನ ಅಧಿಸೂಚನೆ, ಹಕ್ಕುಪತ್ರ ನೀಡಿಕೆ, ಹಕ್ಕುಪತ್ರ ತಂತ್ರಾಂಶ ನಿರ್ವಹಣೆ, ಹಕ್ಕುಪತ್ರ ತಿದ್ದುಪಡಿ ಬಗ್ಗೆ ಮಾಹಿತಿ ನೀಡಿದರು.
ಉಪ ವಿಭಾಗಾಧಿಕಾರಿಗಳಾದ ಗೋಟೂರು ಶಿವಪ್ಪ, ನಾಹಿದಾ ಜಮ್ ಜಮ್, ಸಪ್ತಶ್ರೀ, ತಹಶೀಲ್ದಾರರಾದ ಮಂಜುನಾಥ, ಶಿರಿನ್ ತಾಜ್, ಪಿ.ಎಸ್.ರಾಜೇಶ್ವರಿ, ಮೋಹನ್ಕುಮಾರ್, ಎನ್.ಎ.ಕುಂಜಿ ಅಹಮದ್, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ನಿರಂಜನ್, ಗ್ರಾಮ ಆಡಳಿತಾಧಿಕಾರಿಗಳು, ಪಿಡಿಒ, ಕಂದಾಯ ನಿರೀಕ್ಷಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.