ತುಮಕೂರು: ದಾಬಸ್ಪೇಟೆ ಸಮೀಪದ ನಂದಿಹಳ್ಳಿಯಿಂದ ಮಲ್ಲಸಂದ್ರದ ವರೆಗೆ 44 ಕಿ.ಮೀ ಉದ್ದದ ರಿಂಗ್ ರಸ್ತೆ ನಿರ್ಮಾಣ, ಭೂ ಸ್ವಾಧೀನ ವಿರೋಧಿಸಿ ಹೋರಾಟ ಹಮ್ಮಿಕೊಳ್ಳಲು ರೈತರು ನಿರ್ಧರಿಸಿದ್ದಾರೆ.
ತಾಲ್ಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿಯ ಶೂಲದ ಹನುಮಂತರಾಯಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ರೈತರ ಸಭೆ ನಡೆಯಿತು. ರಿಂಗ್ ರಸ್ತೆಗೆ ಜಮೀನು ಕಳೆದುಕೊಳ್ಳುವ 24 ಹಳ್ಳಿಗಳ ರೈತರು, ರೈತ ಸಂಘದ ಮುಖಂಡರು ಭಾಗವಹಿಸಿದ್ದರು.
ಹೊಸದಾಗಿ ರಿಂಗ್ ರಸ್ತೆ ನಿರ್ಮಿಸಿದರೆ ಫಲವತ್ತಾದ ಕೃಷಿ ಜಮೀನು ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ದಾಬಸ್ಪೇಟೆ– ಗುಬ್ಬಿ ವರೆಗೆ ಗುರುತಿಸಿರುವ 80–100 ಅಡಿಗಳ ರಸ್ತೆಯನ್ನೇ ವಿಸ್ತರಣೆ ಮಾಡಬೇಕು. ಹೊಸದಾಗಿ ರಿಂಗ್ ರಸ್ತೆ ನಿರ್ಮಿಸಬಾರದು. ಜಿಲ್ಲಾಧಿಕಾರಿ ಶನಿವಾರ ಕರೆದಿರುವ ಸಭೆಯಲ್ಲೂ ಇದೇ ವಿಚಾರ ಮಂಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಒಂದು ವೇಳೆ ನಮ್ಮ ಬೇಡಿಕೆಗೆ ಒಪ್ಪದೆ ಭೂ ಸ್ವಾಧೀನಕ್ಕೆ ಮುಂದಾದರೆ ಜಿಲ್ಲಾಧಿಕಾರಿ ಕಚೇರಿ ಎದುರು 24 ಹಳ್ಳಿಗಳ ರೈತರು ಪ್ರತಿಭಟನೆ ನಡೆಸಲು ಒಮ್ಮತಕ್ಕೆ ಬರಲಾಯಿತು.
ರಸ್ತೆ ನಿರ್ಮಾಣ, ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಗ್ರಾಮ ಸಭೆಗಳು ನಡೆದಿಲ್ಲ. ರೈತರಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ನೋಟಿಸ್ ಸಹ ಜಾರಿ ಮಾಡಿಲ್ಲ. ಬಲವಂತವಾಗಿ ಜಮೀನು ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ. ಎಲ್ಲರೂ ಒಟ್ಟಾಗಿ ಹೋರಾಟ ನಡೆಸಲು ನಿರ್ಧರಿಸಲಾಯಿತು.
ರೈತ ಸಂಘದ ಮುಖಂಡರಾದ ಎ.ಗೋವಿಂದರಾಜು, ಜಿ.ಸಿ.ಶಂಕರಪ್ಪ, ರವೀಶ್, ಚಿಕ್ಕಬೋರೇಗೌಡ, ದೊಡ್ಡಯ್ಯ, ಲೋಕೇಶ್, ನಾಗರತ್ನಮ್ಮ, ಲಿಂಗರಾಜು ಸೇರಿದಂತೆ ಜಮೀನು ಕಳೆದುಕೊಳ್ಳುವ 24 ಹಳ್ಳಿಗಳ ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.