ತಿಪಟೂರು: ತಾಲ್ಲೂಕಿನ ಗಡಿ ಭಾಗದ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ಅರ್ಧಕ್ಕೆ ನಿಲ್ಲಿಸಿರುವ ಪರಿಣಾಮ ಸುಮಾರು 30 ಹಳ್ಳಿಗಳಿಗೆ ತೆರಳುವ ಜನರು ಪರದಾಡುವಂತಾಗಿದೆ.
ನೊಣವಿನಕೆರೆ ಹೋಬಳಿಯ ಗಡಿ ಭಾಗದ ಗುಂಗರಮಳೆ ಗೇಟ್ನಿಂದ ಹುಲ್ಲೇನಹಳ್ಳಿ ಕಾವಲು ಮೂಲಕ ಬಿಸಲೇಹಳ್ಳಿ, ಕಂಪಾರಹಳ್ಳಿ, ಸಣ್ಣೇನಹಳ್ಳಿ ಮೂಲಕ ಚನ್ನರಾಯಪಟ್ಟಣ ತಾಲ್ಲೂಕಿನ ಕಲ್ಲಹಳ್ಳಿಗೆ ಸೇರುವ ರಸ್ತೆ ಕಾಮಗಾರಿಯೂ ₹12 ಕೋಟಿ ವೆಚ್ಚದಲ್ಲಿ ಪ್ರಾರಂಭವಾಗಿ 2019ರಲ್ಲಿ ಟೆಂಡರ್ ಆಗಿತ್ತು. ಎರಡು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.
ರಸ್ತೆಗೆ ಹಾಕಿರುವ ಜಲ್ಲಿಯಿಂದ ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ. ವಾಹನಗಳು ಚಲಿಸಿದರೆ ದೂಳಿನಿಂದ ಕೂಡಿ ಓಡಾಡಲು ಆಗುತ್ತಿಲ್ಲ. ಅನೇಕ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿರುವ ನಿದರ್ಶನಗಳಿವೆ. ಈವರೆಗೆ ಗುತ್ತಿಗೆದಾರರು ಸ್ಥಳಕ್ಕೆ ಬಾರದೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದರೆ, ‘ಗುತ್ತಿಗೆ
ದಾರರು ನಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ’ಎಂದು ಪ್ರತಿಕ್ರಿಯಿಸಿದರು. ಜನಪ್ರತಿನಿಧಿಗಳಿಗೆ ಹೇಳಿದರೂ ಪ್ರಯೋಜನವಿಲ್ಲ ಎನ್ನುತ್ತಾರೆ ಸಣ್ಣೇನಹಳ್ಳಿ ಗ್ರಾಮಸ್ಥರು.
ಗುತ್ತಿಗೆದಾರರಿಂದಾಗಿ ಜನರು ರಸ್ತೆಯಲ್ಲಿ ಓಡಾಡದಂತಾಗಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.