ಹುಳಿಯಾರು: ಹೋಬಳಿಯ ವಿವಿಧ ಗ್ರಾಮೀಣ ಭಾಗಗಳಿಗೆ ಸರ್ಕಾರಿ ಬಸ್ ಸೇವೆ ಆರಂಭಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಾಹನಗಳಿಗೆ ಭಾನುವಾರ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ದಸೂಡಿ ಗ್ರಾಮ ತುಮಕೂರು ಜಿಲ್ಲೆಯ ಗಡಿ ಪ್ರದೇಶವಾಗಿದ್ದು, ಸರ್ಕಾರಿ ಬಸ್ ಸೇವೆಯಿಂದ ವಂಚಿತವಾಗಿತ್ತು. ಶಾಲಾ ವೇಳೆಗೆ ವಿದ್ಯಾರ್ಥಿಗಳು ಸರಿಯಾಗಿ ಹೋಗಲು ಪರದಾಡುವಂತಾಗಿತ್ತು. ಸರಿಯಾದ ಸಮಯಕ್ಕೆ ಕಚೇರಿ ತಲುಪಲು ಕಷ್ಟವಾಗುತ್ತಿತ್ತು. ಮಾತಂಗ ಮುನಿ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಲಂಚಮುಕ್ತ ವೇದಿಕೆ ಕಾರ್ಯಕರ್ತರು ಕೆಎಸ್ಆರ್ಟಿಸಿ ಡಿಪೊ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ದಸೂಡಿ, ಗಿಲ್ಲಾನಾಯಕನ ತಾಂಡಾ, ಉಮ್ಲಾನಾಯ್ಕನ ತಾಂಡಾ, ಮರೆನಡು ಪಾಳ್ಯ, ಮಲೆನಡು, ದಬ್ಬಗುಂಟೆ, ಕಲ್ಲೇನಹಳ್ಳಿ, ನುಲೆನೂರು ಭಾಗದಲ್ಲಿ ಬಸ್ ಸಂಚಾರ ಆರಂಭಗೊಳಿಸಿದ್ದಾರೆ. ಭಾನುವಾರ ಬಸ್ ಸಂಚಾರ ಆರಂಭಗೊಳ್ಳುತ್ತಿದ್ದಂತೆ ಗ್ರಾಮಸ್ಥರು ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಿ, ಬಸ್ಗೆ ಪೂಜೆ ಸಲ್ಲಿಸಿದರು.
ಮೇಲುಕಬ್ಬೆ ಭಾಗಕ್ಕೂ ಸರ್ಕಾರಿ ಬಸ್: ತಿಮ್ಮನಹಳ್ಳಿ ಭಾಗದ ಮೈಲುಕಬ್ಬೆ ಗ್ರಾಮಕ್ಕೆ ಬಹುಕಾಲದ ಬೇಡಿಕೆಯಾಗಿದ್ದ ಸರ್ಕಾರಿ ಬಸ್ ಸೇವೆ ಶನಿವಾರ ಆರಂಭಗೊಂಡಿತು. ಗ್ರಾಮಸ್ಥರು ಬಸ್ಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.