ADVERTISEMENT

ತುಮಕೂರು | ಪರಿಶಿಷ್ಟರಿಗೆ ಸಿಗದ ಗುತ್ತಿಗೆ: ಆಕ್ರೋಶ

ಎಸ್‌.ಸಿ, ಎಸ್‌.ಟಿ ಗುತ್ತಿಗೆದಾರರ ಸಂಘ ಆರೋಪ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 7:07 IST
Last Updated 31 ಆಗಸ್ಟ್ 2024, 7:07 IST
ತುಮಕೂರಿನಲ್ಲಿ ಶುಕ್ರವಾರ ಎಸ್‌.ಸಿ, ಎಸ್‌.ಟಿ ಗುತ್ತಿಗೆದಾರರ ಸಂಘದ ಸಮಾಲೋಚನಾ ಸಭೆ ನಡೆಯಿತು. ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಪದಾಧಿಕಾರಿಗಳಾದ ಓಂಪ್ರಕಾಶ್, ಯೋಗೀಶ್, ಹೇಮಕುಮಾರ್, ಗೋವಿಂದರಾಜು ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಶುಕ್ರವಾರ ಎಸ್‌.ಸಿ, ಎಸ್‌.ಟಿ ಗುತ್ತಿಗೆದಾರರ ಸಂಘದ ಸಮಾಲೋಚನಾ ಸಭೆ ನಡೆಯಿತು. ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಪದಾಧಿಕಾರಿಗಳಾದ ಓಂಪ್ರಕಾಶ್, ಯೋಗೀಶ್, ಹೇಮಕುಮಾರ್, ಗೋವಿಂದರಾಜು ಇತರರು ಉಪಸ್ಥಿತರಿದ್ದರು   

ತುಮಕೂರು: ಕಳೆದ ಒಂದೂವರೆ ವರ್ಷದಿಂದ ಎಸ್‌.ಸಿ, ಎಸ್‌.ಟಿ ಗುತ್ತಿಗೆದಾರರಿಗೆ ಯಾವುದೇ ಕಾಮಗಾರಿ ನೀಡದೆ ಅವರನ್ನು ನಿರುದ್ಯೋಗಿಗಳನ್ನಾಗಿಸಿದೆ ಎಂದು ರಾಜ್ಯ ಎಸ್‌.ಸಿ, ಎಸ್‌.ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಸಂಘದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ‘ಸರ್ಕಾರ ಈವರೆಗೆ ನೀಡಿರುವ ಎಲ್ಲಾ ಗುತ್ತಿಗೆಗಳು ₹5 ಕೋಟಿ, ₹10 ಕೋಟಿಯ ಪ್ಯಾಕೇಜ್‌ ಆಗಿವೆ. ಎಸ್‌.ಸಿ, ಎಸ್‌.ಟಿ ಗುತ್ತಿಗೆದಾರರಿಗೆ ₹1 ಕೋಟಿ ವರೆಗೆ ಮೀಸಲಾತಿ ನೀಡಲಾಗಿದೆ. ಇದರಿಂದ ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ’ ಎಂದು ಅಸಮಾಧಾನ ತೋಡಿಕೊಂಡರು.

ಮೀಸಲಾತಿ ಮೊತ್ತ ₹2 ಕೋಟಿಗೆ ಹೆಚ್ಚಿಸಬೇಕು. ಎಸ್‌.ಸಿ, ಎಸ್‌.ಟಿ ಗುತ್ತಿಗೆ ಮೀಸಲು ಕಾಯ್ದೆ ಸಮರ್ಪಕವಾಗಿ ಜಾರಿಗೆ ತರಬೇಕು. ರಾಜ್ಯದಲ್ಲಿ 14,500 ಜನ ಎಸ್‌.ಸಿ, ಎಸ್‌.ಟಿ ಗುತ್ತಿಗೆದಾರರು ಇದ್ದಾರೆ. ಅವರಿಗೆ ಸರ್ಕಾರದಿಂದ ಇದುವರೆಗೂ ಸುಮಾರು ₹500 ಕೋಟಿಗೂ ಹೆಚ್ಚು ಹಣ ಬಾಕಿ ಇದೆ. ಸಾಲ ಮಾಡಿ ಕಾಮಗಾರಿ ಮುಗಿಸಿದ್ದಾರೆ. ಕೂಡಲೇ ಬಾಕಿ ಇರುವ ಹಣ ಪಾವತಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಎಸ್‌.ಸಿ, ಎಸ್‌.ಟಿ ಗುತ್ತಿಗೆದಾರ ಸಂಘದ ಪದಾಧಿಕಾರಿಗಳಾದ ಓಂಪ್ರಕಾಶ್, ಯೋಗೀಶ್, ಹೇಮಕುಮಾರ್, ಗೋವಿಂದರಾಜು, ಲಕ್ಷ್ಮಿನರಸಯ್ಯ, ಎ.ರಂಜನ್‌, ಎಸ್.ಆರ್.ಚಿಕ್ಕಣ್ಣ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.