ADVERTISEMENT

ಪಿಂಚಣಿಗಾಗಿ ಅನುದಾನಿತ ಶಾಲಾ, ಕಾಲೇಜುಗಳ ಸಿಬ್ಬಂದಿ ಬೆಂಗಳೂರಿಗೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 6:11 IST
Last Updated 8 ಅಕ್ಟೋಬರ್ 2022, 6:11 IST
ಅನುದಾನಿತ ಶಾಲಾ, ಕಾಲೇಜುಗಳ ನೌಕರರು, ಸಿಬ್ಬಂದಿ ಶುಕ್ರವಾರ ತುಮಕೂರಿನಿಂದ ಬೆಂಗಳೂರಿನತ್ತ ಪಾದಯಾತ್ರೆಯಲ್ಲಿ ತೆರಳಿದರು.
ಅನುದಾನಿತ ಶಾಲಾ, ಕಾಲೇಜುಗಳ ನೌಕರರು, ಸಿಬ್ಬಂದಿ ಶುಕ್ರವಾರ ತುಮಕೂರಿನಿಂದ ಬೆಂಗಳೂರಿನತ್ತ ಪಾದಯಾತ್ರೆಯಲ್ಲಿ ತೆರಳಿದರು.   

ತುಮಕೂರು:ಪಿಂಚಣಿ ಸೌಲಭ್ಯವು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನುದಾನಿತ ಶಾಲಾ, ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿ ಶುಕ್ರವಾರನಗರದ ಸಿದ್ಧಗಂಗಾ ಮಠದಿಂದ ಬೆಂಗಳೂರಿಗೆ ಪಾದಯಾತ್ರೆಯಲ್ಲಿ ಆರಂಭಿಸಿದರು.

ರಾಜ್ಯ ಅನುದಾನಿತ ಶಾಲೆ, ಕಾಲೇಜುಗಳ ನೌಕರರ ಸಂಘದ ನೇತೃತ್ವದಲ್ಲಿ ಈ ಹೋರಾಟ ಹಮ್ಮಿಕೊಂಡಿದ್ದು, ಮಠದ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ನೌಕರರು ಘೋಷಣೆ ಕೂಗುತ್ತಾ ಪಾದಯಾತ್ರೆಗೆ ಚಾಲನೆ ನೀಡಿದರು.

2006ರ ಏಪ್ರಿಲ್ ನಂತರ ನೇಮಕಗೊಂಡ ನೌಕರರ ಎನ್‌ಪಿಎಸ್ ಯೋಜನೆಗೆ ಆಡಳಿತ ಮಂಡಳಿಯ ವಂತಿಗೆಯನ್ನು ಸರ್ಕಾರವೇ ಭರಿಸಬೇಕು ಮತ್ತು ಕಾಲ್ಪನಿಕ ವೇತನ ಜಾರಿಗೊಳಿಸಬೇಕು. 2006ರ ಏಪ್ರಿಲ್‌ಗೂ ಮುನ್ನ ನೇಮಕವಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರ ಹಿಂದಿನ ಸೇವೆಯನ್ನೂ ಪರಿಗಣಿಸಿ ಹಳೆ ಪಿಂಚಣಿ ಸೌಲಭ್ಯ ಜಾರಿಗೊಳಿಸಬೇಕು ಎಂಬುದು ಪ್ರಮುಖ ಬೇಡಿಕೆಗಳು.

ADVERTISEMENT

‘ಜ್ಯೋತಿ ಸಂಜೀವಿನಿ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳನ್ನು ತಾರತಮ್ಯ ಇಲ್ಲದೆ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೂ ನೀಡಬೇಕು ಎಂಬ ಬೇಡಿಕೆಯೂ ಸೇರಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಹನುಮಂತಪ್ಪ ತಿಳಿಸಿದರು.

‘ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದ ಕಾರಣಅ.10ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾ
ವಧಿ ಧರಣಿ ನಡೆಸಲು ನಿರ್ಧರಿಸಿದ್ದೇವೆ.

ಬೇಡಿಕೆ ಈಡೇರಿಸುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಆರ್.ಹನುಮೇಶ್, ಉಪಾಧ್ಯಕ್ಷ ಪಿ.ಡಿ.ರವಿ, ಪ್ರಚಾರ ಸಮಿತಿ ಅಧ್ಯಕ್ಷ ವೆಂಕಟಾಚಲ, ಕಾರ್ಯಾಧ್ಯಕ್ಷ ಸಿ.ಎಂ.ಶಶಿಧರ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷ ಜೆ.ಧರ್ಮೇಂದ್ರ ಪ್ರಸಾದ್, ಪದಾಧಿಕಾರಿಗಳಾದ ನರೇಶ್, ಗಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.