ಪ್ರಾತಿನಿಧಿಕ ಚಿತ್ರ
ಶಿರಾ: ತಾಲ್ಲೂಕಿನ ಸೀಗಲಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಮನೆ ಮನೆಗೆ ಗಂಗೆ (ಜೆಜೆಎಂ) ಯೋಜನೆ ಅನುಷ್ಠಾನಕ್ಕೆ ಗ್ರಾಮಸ್ಥರು ಅಸಮ್ಮತಿ ಸೂಚಿಸಿ, ಕಾಮಗಾರಿ ನಡೆಸದಂತೆ ಪಟ್ಟು ಹಿಡಿದಿದ ಕಾರಣ ಯೋಜನೆ ಅನುಷ್ಠಾನ ಕೈಬಿಡಲು ತೀರ್ಮಾನಿಸಲಾಯಿತು.
ಸೀಗಲಹಳ್ಳಿ ಗ್ರಾಮದ ಗಣೇಶ ದೇವಸ್ಥಾನದ ಬಳಿ ಗುರುವಾರ ನಾದೂರು ಗ್ರಾ.ಪಂ. ಅಧ್ಯಕ್ಷೆ ತುಳಸಿ ಮಧುಸೂದನ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಯೋಜನೆಯ ಅನುಷ್ಠಾನಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ ಯೋಜನೆ ಜಾರಿಯಾಗುತ್ತಿದ್ದು, ಪ್ರತಿಯೊಂದು ಮನೆಗೆ ನೀರು ಕೊಡುವುದು ಸರ್ಕಾರದ ಉದ್ದೇಶ. ಕಾಮಗಾರಿಗೆ ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳು ಮನವಿ ಮಾಡಿದರು.
ಗ್ರಾ.ಪಂ ಸದಸ್ಯ ಅಶೋಕ ಮಾತನಾಡಿ, ಯೋಜನೆಯು ಯಶಸ್ವಿಯಾದ ಉದಾಹರಣೆ ಕಡಿಮೆ ಇದ್ದು, ನಮ್ಮ ಊರಿನಲ್ಲಿ ಯಾವುದೇ ಕಾರಣಕ್ಕೂ ಜೆಜೆಎಂ ಕಾಮಗಾರಿ ಅನುಷ್ಠಾನ ಬೇಡ ಎಂದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಂಜಿನಿಯರ್ ಸಣ್ಣಚಿತ್ತಯ್ಯ ಮಾತನಾಡಿ, ಗ್ರಾಮದಲ್ಲಿ ₹46.80ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಿದ್ದು ಗ್ರಾಮಸ್ಥರು ಯೋಜನೆಯೇ ಬೇಡ ಎಂದರೆ ಮತ್ತೆ ಅನುದಾನ ಲಭ್ಯವಾಗುದಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಗ್ರಾ.ಪಂ.ಸದಸ್ಯೆ ಸುನಂದಮ್ಮ, ಗಂಗಣ್ಣ, ಮಾಜಿ ಸದಸ್ಯರಾದ ಶಂಕರಪ್ಪ, ತಿಪ್ಪೇಸ್ವಾಮಿ, ಕೃಷ್ಣಪ್ಪ, ಮಂಜುನಾಥ್, ಲಚ್ಚಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.