ತಿಪಟೂರು: ತಿಪಟೂರು ಉಪವಿಭಾಗದ ಪೊಲೀಸರು ಎರಡು ಕೊಲೆ ಪ್ರಕರಣಗಳನ್ನು ಭೇದಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ದುಷ್ಕರ್ಮಿಗಳು ನಗರದ ಮೋರ್ ಮುಂಭಾಗದಲ್ಲಿ ಮೇ 21ರಂದು ವ್ಯಕ್ತಿಯನ್ನು ಕೊಲೆಮಾಡಿ ಸಿಮೆಂಟ್ ಚೀಲದಲ್ಲಿ ಹಾಕಿ ಚರಂಡಿಗೆ ಬಿಸಾಡಿ ಹೋಗಿದ್ದರು. ಕೊಲೆಯಾದ 17 ದಿನಗಳ ನಂತರ ವಾಸನೆ ಬಂದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ
ನೀಡಿದ್ದರು.
ತನಿಖೆಯ ನಂತರ ವ್ಯಕ್ತಿಯನ್ನು ಅರಸೀಕೆರೆ ತಾಲ್ಲೂಕು ಕಣಕಟ್ಟೆ ಹೋಬಳಿ ಹೊಳಲಕೆರೆ ಕುಮಾರ (49) ಎಂದು ಗುರುತಿಸಲಾಗಿತ್ತು. ಜೂಜಾಟದಲ್ಲಿ ಉಂಟಾದ ಜಗಳದಿಂದಾಗಿ ಆತನ ಜತೆಗೆ ಕೂಲಿ ಕೆಲಸ ಮಾಡುತ್ತಿದ್ದ 6 ಮಂದಿ ಈತನ ಕೊಲೆ ಮಾಡಿದ್ದರು. ಕೊಲೆ ಆರೋಪಿಗಳಾದ ಸುಬ್ರಮಣ್ಯ, ವೆಂಕಟೇಶ್, ಕುಳ್ಳ ಮಂಜುನಾಥ್ ಎಂಬುವರನ್ನು ಬಂಧಿಸಿದ್ದು, ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.
ಗಂಡನೇ ಕೊಲೆಗಾರ: ತಾಲ್ಲೂಕಿನನೊಣವಿನಕೆರೆ ಸಮೀಪ ಕನ್ನೂಘಟ್ಟದ ಅಶ್ವಿನಿ ಎಂಬುವರು ಫೆ. 11ರಂದು ಬಾವಿಗೆ ಬಿದ್ದು ಮೃತಪಟ್ಟಿದ್ದರು. ತನ್ನ ತಂಗಿಯ ಸಾವು ಅನುಮಾನಾಸ್ಪದವಾಗಿದೆ ಎಂದು ಅಕ್ಕ ನೊಣವಿನಕೆರೆ ಠಾಣೆಯಲ್ಲಿ ದೂರು
ನೀಡಿದ್ದರು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಗಂಡ ರಘುನಂದನನ್ನು ವಿಚಾರಣೆಗೆ ಒಳಪಡಿಸಿದಾಗ ‘ತಾನು ಮತ್ತು ತನ್ನ ತಾಯಿ ಸೇರಿಕೊಂಡು ವೇಲ್ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ನಂತರ ಮೃತದೇಹವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ಕನ್ನೂಘಟ್ಟದ ತಿಮ್ಮೇಗೌಡರ ತೋಟದ ಬಾವಿಗೆ ಹಾಕಿರುವುದಾಗಿ’ ಒಪ್ಪಿಕೊಂಡಿದ್ದಾನೆ.
ಗಂಡ ರಘುನಂದನ್, ತಾಯಿ ಭಾಗ್ಯಮ್ಮ, ತಂದೆ ಮಂಜುನಾಥ್, ಅಣ್ಣ ಮಹಲಿಂಗಯ್ಯ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.