ADVERTISEMENT

26ಕ್ಕೆ ನಗರಕ್ಕೆ ಕೆಆರ್‌ಎಸ್ ಸೈಕಲ್ ಜಾಥಾ

ತಿಪಟೂರು, ಹುಳಿಯಾರು ಮತ್ತು ಶಿರಾದಲ್ಲಿ ಸಾರ್ವಜನಿಕ ಸಭೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 3:18 IST
Last Updated 10 ಸೆಪ್ಟೆಂಬರ್ 2020, 3:18 IST
ಮಲ್ಲಿಕಾರ್ಜುನಯ್ಯ
ಮಲ್ಲಿಕಾರ್ಜುನಯ್ಯ   

ತುಮಕೂರು: ರಾಜ್ಯದ ಜನರಿಗೆ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣದ ಅವಶ್ಯದ ಬಗ್ಗೆ ತಿಳಿಸಲು ಮತ್ತು ಅವರ ಕಷ್ಟ ಅರಿಯುವ ಉದ್ದೇಶದಿಂದ, ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಸೆ.14ರಿಂದ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ‘ಚಲಿಸು ಕರ್ನಾಟಕ’ ಹೆಸರಿನ ಸೈಕಲ್ ಯಾತ್ರೆ ನಗರಕ್ಕೆ ಸೆ.27ರಂದು ಬರಲಿದೆ ಎಂದು ಕೆಆರ್‌ಎಸ್ ರಾಜ್ಯ ಕಾರ್ಯದರ್ಶಿ ಬಿ.ಎನ್.ಮಲ್ಲಿಕಾರ್ಜುನಯ್ಯ ತಿಳಿಸಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಕೆಆರ್‌ಎಸ್ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ 2,700 ಕಿ.ಮೀ ಯಾತ್ರೆ ನಡೆಯಲಿದೆ. ಮೊದಲ ಹಂತದ 15 ದಿನಗಳ ಯಾತ್ರೆ ಸೆ.14 ರಂದು ಕೋಲಾರದಲ್ಲಿ ಆರಂಭವಾಗುತ್ತದೆ. ಸೆ.26ರಂದು ಜಿಲ್ಲೆಯ ತಿಪಟೂರು ಮತ್ತು ಹುಳಿಯಾರು ತಲುಪಲಿದೆ. ಸೆ.27 ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲಕ ಶಿರಾದಲ್ಲಿ ಸೆ.28ರಂದು ಸಮಾರೋಪಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

ತಿಪಟೂರು, ಹುಳಿಯಾರು, ಶಿರಾದಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ. ಅ.5 ರಿಂದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾತ್ರೆ ನಡೆಯಲಿದೆ. ನ.23 ರಿಂದ ಉತ್ತರ ಕನ್ನಡ, ಮಲೆನಾಡು, ಕರಾವಳಿ ಹಾಗೂ ಗಡಿ ಜಿಲ್ಲೆಗಳಲ್ಲಿ ಮೂರನೇ ಹಂತದ ಯಾತ್ರೆ ಸಂಚರಿಸಲಿದೆ ಎಂದರು.

ADVERTISEMENT

ಶಿರಾ ಉಪ ಚುನಾವಣೆಯಲ್ಲಿ ಸ್ಫರ್ಧೆ: ಶಿರಾ ಉಪ ಚುನಾವಣೆಯಲ್ಲಿ ಪಕ್ಷವು ಸಮರ್ಥ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಈಗಾಗಲೇ ಉಪ ಚುನಾವಣೆಗಾಗಿ ಪಕ್ಷ ಸಂಘಟಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಪಡೆ ಸಿದ್ಧವಾಗಿದೆ ಎಂದು ವಿವರಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರ ಕುಮಾರ್ ಗೌಡ, ಆಸಕ್ತ ಸ್ವಯಂ ಸೇವಾ ಸಂಘಟನೆಗಳು, ಕನ್ನಡ ಮತ್ತು ಜನ ಪರ ಸಂಘಟನೆಗಳು ಯಾತ್ರೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಪಿ.ಜಿ.ಗುರುದತ್, ಬಶೀರ್ ಅಹಮದ್, ಓಬಳೇಶ್, ಗೋವರ್ಧನ್, ಬಿ.ಸಿ.ಹರೀಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.