ADVERTISEMENT

ಕುಣಿಗಲ್: ಕೊಬ್ಬರಿ ಖರೀದಿ ಕೇಂದ್ರದ ಅವ್ಯವಸ್ಥೆ, ರೈತರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 14:06 IST
Last Updated 4 ಮಾರ್ಚ್ 2024, 14:06 IST
ಕುಣಿಗಲ್ ಎಪಿಎಂಸಿ ಆವರಣದಲ್ಲಿ ಕೊಬ್ಬರಿ ಖರೀದಿ ಕೇಂದ್ರದ ಮುಂದೆ ನೊಂದಣಿಗಾಗಿ ಸರತಿ ಸಾಲಿನಲ್ಲಿ ನಿಂತಿರುವ ರೈತರು
ಕುಣಿಗಲ್ ಎಪಿಎಂಸಿ ಆವರಣದಲ್ಲಿ ಕೊಬ್ಬರಿ ಖರೀದಿ ಕೇಂದ್ರದ ಮುಂದೆ ನೊಂದಣಿಗಾಗಿ ಸರತಿ ಸಾಲಿನಲ್ಲಿ ನಿಂತಿರುವ ರೈತರು   

ಕುಣಿಗಲ್: ಪಟ್ಟಣದ ಎಪಿಎಂಸಿ ಆವರಣದಲ್ಲಿ ಪ್ರಾರಂಭವಾಗಿರುವ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ ಮುಂದುವರೆದಿದ್ದು, ಸೋಮವಾರ ರೈತರು ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನೊಂದಣಿಗಾಗಿ ರೈತರು ಭಾನುವಾರ ರಾತ್ರಿಯಿಂದಲೇ ಕಾಯುತ್ತಿದ್ದರು. ನಿಗದಿತ ಸಮಯಕ್ಕೆ ನೊಂದಣಿ ಪ್ರಾರಂಭಕ್ಕೆ ಸರ್ವರ್ ಸಮಸ್ಯೆ ಅಡ್ಡಿಯಾದರೂ ಕೆಲ ಸಮಯದ ನಂತರ ನೊಂದಣಿ ಪ್ರಾರಂಭವಾಯಿತು.

ತಾಲ್ಲೂಕಿನ 400ಕ್ಕೂ ಹೆಚ್ಚು ರೈತರು ನೊಂದಣಿಗಾಗಿ ಕಾಯುತ್ತಿದ್ದರು. ತುರುವೇಕೆರೆ ತಾಲ್ಲೂಕಿನ ಐವತ್ತಕ್ಕೂ ಹೆಚ್ಚು ರೈತರು ನೊಂದಣಿಗಾಗಿ ಬಂದಿರುವುದನ್ನು ಕಂಡ ತಾಲ್ಲೂಕಿನ ರೈತರು ಅಸಮಾಧಾನ ವ್ಯಕ್ತಪಡಿಸಿದರು. ತುರುವೇಕೆರೆ ತಾಲ್ಲೂಕಿನಲ್ಲಿ ನೊಂದಣಿಗಾಗಿ ಏಳು ಕೇಂದ್ರಗಳನ್ನು ಪ್ರಾರಂಭಿಸಿದ್ದರೂ ತಾಲ್ಲೂಕಿನ ಕೇಂದ್ರಕ್ಕೆ ಬಂದಿರುವುದನ್ನು ಖಂಡಿಸಿ ಹೊರ ತಾಲ್ಲೂಕಿನವರ ನೊಂದಣಿ ಮಾಡದಂತೆ ಆಗ್ರಹಪಡಿಸಿದಾಗ ಎರಡು ಗುಂಪಿನ ನಡುವೆ ವಾಗ್ವಾದ ನಡೆಯಿತು. ಪೊಲೀಸರ ಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಗೊಂಡು ಕುಣಿಗಲ್ ತಾಲ್ಲೂಕಿನವರಿಗೆ ಮಾತ್ರ ನೊಂದಣಿ ಪ್ರಾರಂಭಿಸಲಾಯಿತು.

ADVERTISEMENT

ಸರ್ವರ್ ಸಮಸ್ಯೆಯಿಂದಾಗ ಮಧ್ಯಾಹ್ನ 2 ಗಂಟೆಯಾದರೂ ಕೇವಲ 30 ಮಂದಿ ನೊಂದಣಿಯಾಯಿತು. ಅಸಮಾಧಾನಗೊಂಡ ರೈತರು, ಮತ್ತೆರಡು ಕೌಂಟರ್ ಪ್ರಾರಂಭಿಸಲು ಮತ್ತು ಟೋಕನ್ ನೀಡಲು ಪಟ್ಟು ಹಿಡಿದರು. ನಂತರ ಅಧಿಕಾರಿಗಳು ಟೋಕನ್ ವಿತರಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.