ADVERTISEMENT

‘ತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ, ₹ 100 ಕೋಟಿ ಅನುದಾನ ನೀಡಿ’

ತಿಗಳ ಮಹಾಸಂಸ್ಥಾನದ ಜ್ಞಾನಾನಂದಪುರಿ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 21:22 IST
Last Updated 6 ಡಿಸೆಂಬರ್ 2020, 21:22 IST
ಜ್ಞಾನಾನಂದಪುರಿ ಸ್ವಾಮೀಜಿ
ಜ್ಞಾನಾನಂದಪುರಿ ಸ್ವಾಮೀಜಿ   

ತುಮಕೂರು: ರಾಜ್ಯ ಸರ್ಕಾರ ತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ ₹ 100 ಕೋಟಿ ಅನುದಾನ ನೀಡಬೇಕು. ತುಮಕೂರು ಜಿಲ್ಲೆಯವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ತಿಗಳ ಮಹಾಸಂಸ್ಥಾನದ ಜ್ಞಾನಾನಂದಪುರಿ ಸ್ವಾಮೀಜಿ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಿಗಳ ಸಮುದಾಯ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ. ಎಲ್ಲ ಸರ್ಕಾರಗಳು ನಮಗೆ ವಂಚಿಸಿವೆ’ ಎಂದು ದೂರಿದರು.

ಚುನಾವಣೆ ಸಂದರ್ಭದಲ್ಲಿ ಮಾತ್ರ ತಿಗಳ ಜನಾಂಗವನ್ನು ನೆನಪಿಸಿಕೊಳ್ಳುವ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳು ಮೀಸಲಾತಿ, ಸರ್ಕಾರಿ ಸೌಲಭ್ಯ ನೀಡಲು ಹಿಂದೆ ಸರಿಯುತ್ತಿವೆ. ರಾಜಕೀಯ ಅಧಿಕಾರ ಇಲ್ಲದಿರುವುದೇ ಸಮುದಾಯ ಹಿಂದುಳಿಯಲು ಕಾರಣವಾಗಿದೆ. ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆ ಇರುವ ತಿಗಳ ಸಮುದಾಯಕ್ಕೆ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ಸಮುದಾಯದವರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ನಿಗಮ ರಚನೆಯ ಬಗ್ಗೆ ಮನವಿ ಸಲ್ಲಿಸಿದ್ದರು. ಅವರೂ ಸಹ ಭರವಸೆ ನೀಡಿದ್ದರು. ಶಿರಾ ಕ್ಷೇತ್ರದಲ್ಲಿರುವ 17 ಸಾವಿರ ತಿಗಳ ಸಮುದಾಯದ ಮತದಾರರು ಬಿಜೆಪಿ ಬೆಂಬಲಿಸಿದ್ದಾರೆ. ಸಮುದಾಯದ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು ಎಂದರು.

ನಿಗಮ ರಚನೆಗೆ ಆಗ್ರಹಿಸಿ ತುಮಕೂರಿನಲ್ಲಿ ಸಮಾವೇಶ ಮಾಡಲಾಗುವುದು. ಜನಾಂಗವನ್ನು ಪ್ರವರ್ಗ ‘2 ಎ’ ನಿಂದ ಪ್ರವರ್ಗ 1 ಕ್ಕೆ ಬದಲಾಯಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.