ತುರುವೇಕೆರೆ: ತಾಲ್ಲೂಕಿನ ಪುರ ಗ್ರಾಮದಲ್ಲಿ ಶಂಭುಲಿಂಗೇಶ್ವರ ಸ್ವಾಮಿ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.
ಶಂಭುಲಿಂಗೇಶ್ವರ ದನಗಳ ಜಾತ್ರೆ ನೋಡುಗರನ್ನು ಕಣ್ಮನ ಸೆಳೆಯಿತು. ಜಾತ್ರೆ ಅಂಗವಾಗಿ ಶಂಭುಲಿಂಗೇಶ್ವರ ಸ್ವಾಮಿಯ ರಥೋತ್ಸವ ನಡೆಯಿತು. ರಥವನ್ನು ವಿವಿಧ ಬಣ್ಣದ ಬಟ್ಟೆಗಳಿಂದ ಹಲವು ರೀತಿಯ ಹೂಗಳಿಂದ ಸಿಂಗರಿಸಲಾಗಿತ್ತು. ಬಳಿಕ ಮೂರ್ತಿಯನ್ನು ಕೂರಿಸಿ ವಿಶೇಷ ಪೂಜೆ, ಬಂಡಿ ಪೂಜೆ ಮುಂತಾದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಮಹಾ ಮಂಗಳಾರತಿ ಮಾಡಲಾಯಿತು.
ನಂತರ ಭಕ್ತರು ಶಂಭುಲಿಂಗನ ಜಯಘೋಷದೊಂದಿಗೆ ರಥವನ್ನು ಉತ್ಸಾಹದಿಂದ ದೇವಸ್ಥಾನದ ಮುಂಭಾಗದಿಂದ ಬನ್ನಿಮರದ ಬಳಿಗೆ ಎಳೆದು ಹಿಂತಿರುಗಿಸಿದರು. ಚಲಿಸುತ್ತಿದ್ದ ರಥಕ್ಕೆ ಭಕ್ತರು ಹಣ್ಣು, ಧವನ ಎಸೆಯುವ ಮೂಲಕ ತಮ್ಮ ಕೋರಿಕೆ ಕೇಳಿಕೊಂಡರು.
ರಥೋತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ನಂಜೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಾ, ಉಪಾಧ್ಯಕ್ಷ ರಾಜಶೇಖರ್, ಸದಸ್ಯ ಪಿ.ಎಲ್.ನವೀನ್ಕುಮಾರ್, ಮುಖಂಡರಾದ ಪಿ.ಟಿ.ಮಹೇಶ್, ಪಿ.ಟಿ.ಗಂಗಾಧರ್, ಎಂ.ಸಿ.ರೇಣುಕಪ್ಪ, ಮಲ್ಲೇಶಯ್ಯ, ಬಸವರಾಜು, ಮೋಹನ, ಜೈಪ್ರಕಾಶ್, ಕುಮಾರ ಹಾಗೂ ಮದಾಪಟ್ಟಣ, ಚೆಂಡೂರು, ಆನೆಮಳೆ ಗ್ರಾಮಸ್ಥರು ಮತ್ತು ಭಕ್ತರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.