ADVERTISEMENT

ಚರ್ಚೆಗೆ ಗ್ರಾಸವಾದ ಶಿರಾ ಶಾಸಕರ ಫೇಸ್‌ಬುಕ್‌ ಪೋಸ್ಟ್‌

ಮದಲೂರು ಕೆರೆಗೆ ನೀರು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 3:59 IST
Last Updated 13 ಜನವರಿ 2021, 3:59 IST
ರಾಜೇಶ್ ಗೌಡ ಅವರ ಫೇಸ್‌ಬುಕ್‌ ಪೋಸ್ಟ್‌
ರಾಜೇಶ್ ಗೌಡ ಅವರ ಫೇಸ್‌ಬುಕ್‌ ಪೋಸ್ಟ್‌   

ಶಿರಾ: ಮದಲೂರು ಕೆರೆಗೆ ಹರಿಯುತ್ತಿದ್ದ ನೀರು ನಿಂತಿರುವ ಬಗ್ಗೆ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಸಮಜಾಯಿಷಿತಾಲ್ಲೂಕಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಸೋಮವಾರ ರಾತ್ರಿ ‘ಅಜ್ಜೇನಹಳ್ಳಿ ಭೂಪಸಂದ್ರ ಮಾಯಸಂದ್ರ ಈ ಭಾಗದವರೆಲ್ಲ ಟ್ಯೂಬ್ ಹಾಕಿಕೊಂಡು ಕೆರೆಗೆ ನೀರು ಬಿಟ್ಟುಕೊಳ್ಳುತ್ತಿರುವುರಿಂದ ಮದಲೂರು ಕೆರೆಗೆ ನೀರು ಸಂಪೂರ್ಣವಾಗಿ ನಿಂತೇ ಹೋಗಿದೆ. ಈ ಮಾಹಿತಿ ಕಾವೇರಿ ನೀರಾವರಿ ನಿಗಮದವರೆಗೆ ತಲುಪಿದೆ. ನೀರು ಮದಲೂರು ಕೆರೆಗೆ ಹೋಗುತ್ತಿಲ್ಲ. ನೀರು ನಿಯೋಜಿತ ಕೆರೆಗೆ ತಲುಪುತ್ತಿಲ್ಲ ಎಂದು ಮದಲೂರು ಕೆರೆಗೆ ಹರಿಯುತ್ತಿದ್ದ ಹೇಮಾವತಿ ನೀರನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ತುಮಕೂರು ನಾಲೆಯಿಂದ ಕಳ್ಳಂಬೆಳ್ಳ ಕೆರೆಗೆ ನೀರು ಹರಿಯುತ್ತಿದ್ದು, ಕಳ್ಳಂಬೆಳ್ಳ ಕೆರೆಯಲ್ಲಿ ನೀರು ಶೇಖರಣೆಯಾಗುತ್ತಿದೆ. ಕಾವೇರಿ ನಿಗಮದ ಅಧಿಕಾರಿಗಳೊಡನೆ ಮಾತುಕತೆಯ ನಂತರ ಮದಲೂರು ಕೆರೆಗೆ ಮತ್ತೊಮ್ಮೆ ಶೀಘ್ರದಲ್ಲೇ ನೀರು ಹರಿಸುವ ಆಶಾಭಾವನೆ ವ್ಯಕ್ತಪಡಿಸುತ್ತಿದ್ದೇನೆ’ ಬರೆದುಕೊಂಡಿದ್ದಾರೆ. ಜೊತೆಗೆ ರೈತರು ನಾಲೆಗೆ ಹಾಕಿರುವ ಟ್ಯೂಬ್ (ಪೈಪ್) ಚಿತ್ರವನ್ನು ಹಾಕಿದ್ದಾರೆ.

ಇದನ್ನು ಗಮನಿಸಿದ ಕೆಲವರು ಪರವಾಗಿ ಮತ್ತೇ ಕೆಲವರು ವಿರುದ್ಧವಾಗಿ ಚರ್ಚೆ ಮಾಡುತ್ತಿದ್ದಾರೆ.

ADVERTISEMENT

‘ಈ ಕಾರಣವನ್ನು ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ಅಂತ ಅಧಿಕಾರಿಗಳಿದ್ದಾರೆ, ಪೊಲೀಸ್ ಇಲಾಖೆ ಇದೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ. ಅದು ಬಿಟ್ಟು ನೀರು ನಿಂತಿರುವುದಕ್ಕೆ ಅಸಮಂಜಸ ಕಾರಣ ನೀಡುತ್ತಿರುವುದು ಹಾಸ್ಯಸ್ಪದ’ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ.

‘ಅಧಿಕಾರ ನಿಮ್ಮ ಕೈಯಲ್ಲಿ ಇದ್ದರು ಸಹ ಈ ರೀತಿ ಹೊಣೆಗೇಡಿ ಹೇಳಿಕೆ ಬಾಲಿಷ ಎನಿಸುತ್ತದೆ. ಇದರ ಹಿಂದೆ ಬೇರೆಯವರ ಕೈವಾಡ ಇದೆ ಎನ್ನಿಸುತ್ತಿದೆ’ ಎಂದು ಟ್ರೋಲ್ ಮಾಡಿದ್ದಾರೆ.

ಕೇವಲ ಒಂದು ಕೆರೆಗೆ ನೀರು ತುಂಬಿಸಿದರೆ ಆರ್ಥ ಇಲ್ಲ. ಅಕ್ಕಪಕ್ಕದ ಕೆರೆಗಳಿಗೂ ನೀರು ತುಂಬಿಸಬೇಕು ಅವರು ರೈತರಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.