ಗುಬ್ಬಿ: ‘ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ನೀಡಿರುವುದು ಹುಚ್ಚರ ಕೈಗೆ ಕಲ್ಲನ್ನು ಕೊಟ್ಟರೆ ಅವನ ಮನಸ್ಸಿಗೆ ಬಂದ ಕಡೆ ಎಸೆಯುತ್ತಾನಲ್ಲ ಆ ರೀತಿ ಆಗಿದೆ. ಸರ್ಕಾರ ದಿನಕ್ಕೊಂದು ರೀತಿಯ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ರೈತರ ಮತ್ತು ಬಡಜನರ ಬದುಕಿನ ಮೇಲೆ ಕಲ್ಲು ಹೊಡೆಯುತ್ತಿದೆ’ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ವ್ಯಂಗ್ಯವಾಡಿದರು.
ಪಟ್ಟಣದ ಎಪಿಎಂಸಿ ಆವರಣದ ಲ್ಲಿ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ತೆಂಗು ಬೆಳೆಗಾರರಿಗೆ ನೀಡುವ ₹10,300ರ ಜತೆಗೆ ರಾಜ್ಯ ಸರ್ಕಾರ ಸಹ ₹2,500 ಬೆಂಬಲ ಬೆಲೆ ನೀಡಿದರೆ ಇಂತಹ ಸಮಯದಲ್ಲಿ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
‘ಅಧಿಕಾರಿಗಳ ಮೂಲಕ ಸಂಸದರು ಲಂಚ ಪಡೆದಿದ್ದಾರೆ ಎಂಬ ಆರೋಪ ಮಾಡಿದ್ದೇನೆ. ಅದನ್ನು ಅವರೇ ಪ್ರಶ್ನಿಸಲಿ. ಯಾರೋ ದಾರಿಯಲ್ಲಿ ಹೋಗುವ ತಿಮ್ಮ, ಬೊಮ್ಮ, ಬೋರ ಇಂತಹವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ’ ಎಂದು ಹೇಳಿದರು.
‘ಸಂಸದರಿಗೆ ಲಂಚ ಕೊಟ್ಟಿದ್ದೇವೆ ಎಂದು ಅಧಿಕಾರಿಗಳು ಹೇಳಿಕೊಂಡು ಜನರಿಂದ ದುಡ್ಡು ಬಾಚುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ನನಗೆ ಬಂದಿವೆ. ಹಾಗಾಗಿ, ನಾನು ಸಂಸದರ ಮೇಲೆ ಆರೋಪ ಮಾಡಿದ್ದೇನೆ. ಆದರೆ, ಕುಂಬಳಕಾಯಿ ಕಳ್ಳ ಎಂದರೆ ನೀವೆಲ್ಲಾ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಿ. ಅವಶ್ಯಕತೆ ಇರುವವರು ನನ್ನನ್ನು ಕೇಳಲಿ ಬಿಡಿ ಉತ್ತರ ನೀಡುತ್ತೇನೆ’ ಎಂದರು.
ಮುಖಂಡರಾದ ಕಳ್ಳಿಪಾಳ್ಯ ಲೋಕೇಶ್, ತಿಮ್ಮರಾಜು, ಲೋಕೇಶ್ವರ್, ಕುಮಾರ್, ವಿಜಯ್ ಕುಮಾರ್, ಕೇಬಲ್ ರಾಜು, ಕೃಷ್ಣ ಶೆಟ್ಟಿ, ನಿತಿನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.