ಶಿರಾ: ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಅವರ 40ನೇ ವರ್ಧಂತಿ ಮಹೋತ್ಸವದ ಅಂಗವಾಗಿ ಏ.21 ರಂದು ಬೆಳಿಗ್ಗೆ 10ಕ್ಕೆ ಮಠದ ಅವರಣದಲ್ಲಿ ನೀರಾವರಿ ಹಕ್ಕೊತ್ತಾಯ ದಿನ ಹಮ್ಮಿಕೊಳ್ಳಲಾಗಿದೆ.
ಆಡಂಬರದ ಜನ್ಮದಿನಾಚರಣೆ ಹಾಗೂ ಗುರುವಂದನೆ ಸೂಕ್ತವಲ್ಲ ಎಂಬ ಶ್ರೀಗಳ ಆಶಯ ಕಾರಣ ಲೋಕ ಕಲ್ಯಾಣಾರ್ಥವಾಗಿ ಹೋಮ-ಹವನ ನೆರವೇರಲಿದೆ. ಶ್ರೀಗಳ ಭಕ್ತ ವೃಂದದ ಒತ್ತಾಸೆಯಂತೆ ಗುರುವಂದನೆ ಜರುಗಲಿದೆ.
ನೀರಿನ ಸೆಲೆಯೂ ಇಲ್ಲದೆ ಬರಡಾಗಿರುವ ಬಯಲುಸೀಮೆಗೆ ನೀರನ್ನು ಯಾವ ಮೂಲದಿಂದ ಹರಿಸಬೇಕು ಎಂದು ಸ್ವಾಮೀಜಿ ಹೋರಾಟ ನಡೆಸುತ್ತಿದ್ದಾರೆ. ಆ ಕಾರಣದಿಂದ ಸ್ವಾಮೀಜಿ ಅವರ ಜನ್ಮದಿನವನ್ನು ನೀರಾವರಿ ಹಕ್ಕೊತ್ತಾಯ ಸಭೆಯನ್ನಾಗಿ ಭಕ್ತರು ಆಚರಿಸುತ್ತಿದ್ದಾರೆ. ಇದು ಸರ್ಕಾರದ ಮೇಲೆ ಒತ್ತಡ ತರಲು ಭಕ್ತರು ಹಲವು ವರ್ಷಗಳಿಂದ ನಡೆಸುತ್ತಿರುವ ಆಚರಣೆ ಎನ್ನುವುದು ವಿಶೇಷವಾಗಿದೆ.
ಅತಿ ಕಿರಿಯ ವಯಸ್ಸಿನಲ್ಲಿಯೇ ಸ್ವಾಮೀಜಿ ಅವರು ನೀರಾವರಿ ಬಗ್ಗೆ ನಡೆಸುತ್ತಿರುವ ಹೋರಾಟವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ , ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಸದಾನಂದಗೌಡ, ಸಚಿವ ಡಿ.ಕೆ.ಶಿವಕುಮಾರ್, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಶ್ಲಾಘಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.