ತುಮಕೂರು: ನಗರದ 15ನೇ ವಾರ್ಡ್ನ ತೋಟಗಾರಿಕೆ ಇಲಾಖೆ ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಕಳೆದ ಎರಡು ವರ್ಷಗಳ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡಿದ್ದರೂ ಈವರೆಗೂ ಪೂರ್ಣಗೊಂಡಿಲ್ಲ. ಈ ರಸ್ತೆಯಲ್ಲಿ ಸಾರ್ವಜನಿಕರ ಓಡಾಟ ತೀವ್ರ ಕಷ್ಟಕರವಾಗಿದೆ.
ಸಾರ್ವಜನಿಕರ ಆಕ್ಷೇಪದಿಂದಾಗಿ ಪಾಲಿಕೆ ಸದಸ್ಯೆ ಗಿರಿಜಾ, ಪಾಲಿಕೆ ಆಯುಕ್ತೆ ರೇಣುಕಾದೇವಿ, ಸ್ಮಾರ್ಟ್ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು.
ಪ್ರತಿದಿನ ನೀರು, ಗ್ಯಾಸ್, ವಿದ್ಯುತ್ ಕೇಬಲ್ ಅಳವಡಿಕೆ ನೆಪದಲ್ಲಿ ರಸ್ತೆ ಅಗೆಯಲಾಗುತ್ತಿದೆ. ಮನೆ ಮುಂದೆ ವಾಹನಗಳು ಸಂಚರಿಸಿದರೆ ದೂಳು ತುಂಬಿಕೊಳ್ಳುತ್ತದೆ. ಎರಡು ವರ್ಷಗಳಿಂದಲೂ ಎಸ್.ಎಸ್.ಪುರಂ ಭಾಗದ ಜನರು ದೂಳಿನೊಂದಿಗೆ ಬದುಕುವಂತಾಗಿದೆ ಎಂದು ಸಾರ್ವಜನಿಕರು ಈ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸಿರುವ ರಸ್ತೆಗಳು ಕಿರಿದಾಗಿದ್ದು, ವಾಹನಗಳು ಸಂಚರಿಸುವುದು ಕಷ್ಟಕರವಾಗಿದೆ. ರೈಲ್ವೆ ನಿಲ್ದಾಣ ರಸ್ತೆ ಕಿಷ್ಕಿಂದೆ ಮಾಡಿದ್ದು, ಓಡಾಟಕ್ಕೆ ತೊಂದರೆಯಾಗಿದೆ ಎಂದು ಆಕ್ಷೇಪಿಸಿದರು.
ಎರಡು ವರ್ಷಗಳ ಹಿಂದೆ ಮಾದರಿ ರಸ್ತೆಯನ್ನಾಗಿಸುವ ಭರವಸೆ ನೀಡಲಾಗಿತ್ತು. ಆದರೆ ಈವರೆಗೂ ಕಾಮಗಾರಿ ಮುಗಿದಿಲ್ಲ. ನಿತ್ಯ ಒಂದಿಲ್ಲೊಂದು ಕಾರಣಕ್ಕೆ ರಸ್ತೆ ಅಗೆಯಲಾಗುತ್ತಿದೆ. ಈ ಭಾಗದ ಜನರಿಗೆ ತೀವ್ರ ತೊಂದರೆಯಾಗಿದ್ದು, ತಕ್ಷಣ ಕಾಮಗಾರಿ ಪೂರ್ಣಗೊಳಿಸುವಂತೆ ಸದಸ್ಯೆ ಗಿರಿಜಾ ಆಗ್ರಹಿಸಿದರು.
ವೀರ ಸಾವರ್ಕರ್ ಪಾರ್ಕ್ ಅಭಿವೃದ್ಧಿಗೆ ₹30 ಲಕ್ಷ ಮೀಸಲಿಟ್ಟಿದ್ದರೂ ಈವರೆಗೂ ಕೆಲಸ ಆರಂಭಿಸಿಲ್ಲ. ಸ್ಮಾರ್ಟ್ ಸಿಟಿ ಹಾಗೂ ಪಾಲಿಕೆ ಅಧಿಕಾರಿಗಳ ತಿಕ್ಕಾಟದಿಂದಾಗಿ ಪಾರ್ಕ್ ಅಭಿವೃದ್ಧಿ ನೆನೆಗುದಿಗೆ ಬಿದ್ದಿದ್ದು, ಹಾಳುಕೊಂಪೆಯಾಗಿದೆ. ಕುಡುಕರ ಹಾಳಿ ಹೆಚ್ಚಾಗಿದ್ದು, ಶೀಘ್ರ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದರು.
ಎಸ್.ಎಸ್.ಪುರಂ ರಸ್ತೆಗಳಲ್ಲಿ ಡಕ್ಕಿಂಗ್, ಚರಂಡಿ ಕಾಮಗಾರಿಗಳು ಮುಗಿದಿವೆ. ರಸ್ತೆಗಳಿಗೆ ಶೀಘ್ರ ಡಾಂಬರೀಕರಣ ಮಾಡಲಾಗುವುದು. ವೀರ ಸಾವರ್ಕರ್ ಪಾರ್ಕ್ ಅಭಿವೃದ್ಧಿಪಡಿಸಿ, ಸಿ.ಸಿ ಟಿ.ವಿ ಅಳವಡಿಸಲಾಗುವುದು ಎಂದು ರಂಗಸ್ವಾಮಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.