ತುಮಕೂರು: ಕನಿಷ್ಠ ವೇತನ, ಭವಿಷ್ಯನಿಧಿ, ಭದ್ರತೆ ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ. 18ರಂದು ಬಳ್ಳಾರಿ ಜಿಲ್ಲೆ ಸಿರಗುಪ್ಪ ಪಟ್ಟಣದಲ್ಲಿ ಹಮಾಲಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ನೇತೃತ್ವದಲ್ಲಿ ಹಮಾಲಿ ಕಾರ್ಮಿಕರ ರಾಜ್ಯ ಮಟ್ಟದ ಸಮಾವೇಶ ಏರ್ಪಡಿಸಲಾಗಿದೆ.
ಗಿರಣಿಗಳಿಗೆ ಬರುವ ಅಕ್ಕಿ, ಅಡುಗೆ ಎಣ್ಣೆ, ಬೇಳೆ ಮುಂತಾದ ಧಾನ್ಯಗಳ ಸಂಗ್ರಹ ಮತ್ತು ಸಂಸ್ಕರಿಸಿದ ಉಪ ಉತ್ಪಾದನೆಗಳ ಲೋಡಿಂಗ್, ಅನ್ಲೋಡಿಂಗ್ ಕೆಲಸದಲ್ಲಿ ಹಮಾಲಿಗಳ ಪಾತ್ರ ಪ್ರಮುಖವಾದದ್ದು. ಕಾರ್ಮಿಕರಿಗೆ ‘ರಟ್ಟೆ ಬಿಟ್ಟರೇ ಆಸ್ತಿಯೇ ಇಲ್ಲ’. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ಕಾರ್ಮಿಕರ ಫೆಡರೇಶನ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.
ನಗರದಲ್ಲಿ ಬುಧವಾರ ಸಮಾವೇಶದ ಕುರಿತು ವಿವಿಧೆಡೆ ಪ್ರಚಾರ ನಡೆಸಿ ಮಾತನಾಡಿ, ಶ್ರಮ ಜೀವಿಗಳ ಕೆಲಸಕ್ಕೆ ತಕ್ಕ ಫಲ ಸಿಗುತ್ತಿಲ್ಲ. ಬಹುತೇಕ ಕಡೆ ಕನಿಷ್ಠ ವೇತನ ಕೊಡುತ್ತಿಲ್ಲ. ಗಿರಣಿ, ಗೋದಾಮು, ವೇರ್ಹೌಸ್ ಕಾರ್ಮಿಕರಿಗೆ ಗುರುತಿನ ಚೀಟಿ, ಭವಿಷ್ಯನಿಧಿ ಮುಂತಾದ ಸೌಲಭ್ಯ ಕಲ್ಪಿಸುವುದು ಕಡ್ಡಾಯ. ಆದರೆ ಅಗತ್ಯ ಸೌಕರ್ಯ ಒದಗಿಸುತ್ತಿಲ್ಲ ಎಂದರು.
ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಕಡೆಗಳಿಂದ ಹಮಾಲಿ ಕಾರ್ಮಿಕರು ಭಾಗವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಮುಖಂಡರಾದ ಇಂತಿಯಾಜ್, ಲಕ್ಷ್ಮಣ, ಲಕ್ಷ್ಮಿಪತಿ, ಗಂಗಾಧರ್, ರಾಮಕೃಷ್ಣ, ರಮೇಶ್, ಲಿಂಗರಾಜು, ಮಂಜುನಾಥ್, ಎನ್.ಕೆ.ಸುಬ್ರಮಣ್ಯ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.