ತುಮಕೂರು: ತಾಲ್ಲೂಕು ಮಟ್ಟದಲ್ಲಿ ಸಾಹಿತ್ಯ ಭವನ ನಿರ್ಮಿಸಿ, ಜಿಲ್ಲಾ ಮಟ್ಟದಲ್ಲಿ ಆರು ತಿಂಗಳಿಗೊಮ್ಮೆ ಪುಸ್ತಕ ಮೇಳ ಆಯೋಜಿಸುವ ಮೂಲಕ ಯುವಕರಲ್ಲಿ ಓದುವ ಆಸಕ್ತಿ ಉತ್ತೇಜಿಸಲು ಉದ್ದೇಶಿಸಲಾಗಿದೆ ಎಂದು ಸಾಹಿತಿ ಸಿ.ಕೆ.ರಾಮೇಗೌಡ ಇಲ್ಲಿ ಗುರುವಾರ ಹೇಳಿದರು.
‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಒಮ್ಮೆ ಅವಕಾಶ ನೀಡಿದರೆ ಭಾಷೆ, ಸಾಹಿತ್ಯ, ಕನ್ನಡಿಗರನ್ನು ಸಂರಕ್ಷಿಸುವ ಕೆಲಸ ಮಾಡುತ್ತೇನೆ. ಜನಪದ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿ, ಗ್ರಾಮ ಮಟ್ಟದಿಂದ ಪರಿಷತ್ ಕಟ್ಟುವ ಯೋಜನೆ ರೂಪಿಸಿಕೊಂಡಿದ್ದೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ
ತಿಳಿಸಿದರು.
‘ಗ್ರಾಮೀಣ ಭಾಗದಲ್ಲಿ ಕನ್ನಡ ಶಾಲೆಗಳನ್ನು ದತ್ತುಪಡೆದು ಅಭಿವೃದ್ಧಿ ಪಡಿಸಲಾಗುವುದು. ಸಾಹಿತ್ಯ ಸಮ್ಮೇಳನಗಳನ್ನು ಅರ್ಥಪೂರ್ಣವಾಗಿ ಆಚರಿಸಿ, ಯುವ ಬರಹಗಾರರಿಗೆ ಅವಕಾಶ ನೀಡುವಂತೆ ನೋಡಿಕೊಳ್ಳುತ್ತೇನೆ. ಗ್ರಾಮ ಮಟ್ಟದಲ್ಲಿ ಸಾಹಿತ್ಯ ಮರುಓದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉಚಿತ ವಾಚನಾಲಯ, ಗ್ರಂಥಾಲಯ ಸ್ಥಾಪಿಸಿ ಓದುವ ಅಭಿರುಚಿಯನ್ನು ಬಲಪಡಿಸಲಾಗುವುದು. ಹೋಬಳಿ ಮಟ್ಟದಲ್ಲಿ ಜಾನಪದ ಕಲಾ
ಪ್ರದರ್ಶನ, ವಿದ್ಯಾರ್ಥಿಗಳಿಗೆ ಜನಪದ ಕಲಿಕಾ ಶಿಬಿರ ಹಮ್ಮಿಕೊಳ್ಳಲು ಉದ್ದೇಶಿಸಿದ್ದೇನೆ’ ಎಂದು
ವಿವರಿಸಿದರು.
ಯುವ ಬರಹಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಯುವಜನರ ಉತ್ತಮ ಕೃತಿಗಳನ್ನು ಪ್ರಕಟಿಸಲಾಗುವುದು. ಕಥಾ ಕಮ್ಮಟ, ಕಾವ್ಯ ಕಮ್ಮಟ ಏರ್ಪಡಿಸಿ ಹೊಸ ಬರಹಗಾರರಲ್ಲಿ ಆತ್ಮವಿಶ್ವಾಸ ಮೂಡಿಸಲಾಗುವುದು ಎಂದರು.
ಮನು ಬಳಿಗಾರ್ ಪರಿಷತ್ ಅಧ್ಯಕ್ಷರಾದ ನಂತರ ಬೈಲಾ ತಿದ್ದುಪಡಿಮಾಡಿ ಹಿಂಬಾಗಿಲ ಮೂಲಕ ಅಧಿಕಾರ ಮುಂದುವರೆಸಿದರು. 30 ವರ್ಷ ಸರ್ಕಾರದಲ್ಲಿ ನಡುಬಗ್ಗಿಸಿದವರು ಸ್ವಾಭಿಮಾನದಿಂದ ಕಾರ್ಯ ನಿರ್ವಹಿಸಲಿಲ್ಲ. ಪರಿಷತ್ ಸ್ವಾಯತ್ತ ಸಂಸ್ಥೆಯಾಗಿ ಉಳಿಯಬೇಕಾದರೆ ನಿವೃತ್ತ ಅಧಿಕಾರಿಗಳನ್ನು ಆಯ್ಕೆ ಮಾಡಬಾರದು. ಆಗಿರುವ ತಪ್ಪನ್ನು ಸರಿಪಡಿಸಲು ಕನ್ನಡಿಗರಿಗೆ ಈಗ ಅವಕಾಶ ಸಿಗಲಿದೆ ಎಂದು ಹೇಳಿದರು.
ಪ್ರಮುಖರಾದ ದಿನೇಶ್, ಕವಿ ಹುಳಿಯಾರ್ ಶಬ್ಬೀರ್, ಕನ್ನಡ ಹೋರಾಟಗಾರ ರಘುರಾಮ್, ಶಂಕರ್ ಹೂಗಾರ್, ರವಿಕುಮಾರ್, ವಿಜಯ್ ಕುಮಾರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.