ತುಮಕೂರು: ಬೆಲೆ ಏರಿಕೆ, ಉದ್ಯೋಗ ನಷ್ಟ, ಸಂಬಳ ಕಡಿತ, ರೈತರ ಸಂಕಷ್ಟಕ್ಕೆ ಸ್ಪಂದಿಸದಿರುವುದು ಹೀಗೆ ನಿರಂತರವಾಗಿ ಸರ್ಕಾರಗಳು ನಡೆಸುತ್ತಿರುವ ಆರ್ಥಿಕ ದಾಳಿಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಾಮಾಜಿಕ ಅನೈಕ್ಯತೆ ಹುಟ್ಟುಹಾಕಲಾಗುತ್ತಿದೆ ಎಂದು ಸಿಪಿಎಂ ರಾಜ್ಯ ಮುಖಂಡ ಕೆ. ಮಹಾಂತೇಶ್ ಆರೋಪಿಸಿದರು.
ಸರ್ಕಾರಗಳು ರೈತ, ಕಾರ್ಮಿಕ ಹಾಗೂ ಜನ ವಿರೋಧಿ ನೀತಿಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಜಾಥಾದಲ್ಲಿ ಅವರು ಮಾತನಾಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಪರವಿದೆ. ಬಂಡವಾಳ ಶಾಹಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ರೈತರ ಚಳವಳಿ ಹತ್ತಿಕ್ಕಲಾಗುತ್ತಿದೆ ಎಂದು ದೂರಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, ‘ಕೇಂದ್ರ ಸರ್ಕಾರವು ರಾಜ್ಯದ ಪಾಲಿನ ಜಿಎಸ್ಟಿ ಪಾಲನ್ನು ನೀಡಿಲ್ಲ. ಸಂವಿಧಾನಾತ್ಮಕವಾಗಿ ಕಾಯ್ದೆಗಳನ್ನು ಜಾರಿಗೆ ತರುತ್ತಿಲ್ಲ’ ಎಂದು ಆರೋಪಿಸಿದರು. ಬೆಳಿಗ್ಗೆ 8ರಿಂದ ಆರಂಭವಾದ ಜಾಥಾ ಸಂಜೆ 5 ಗಂಟೆ ವರೆಗೆ ಎಪಿಎಂಸಿ ಮಾರುಕಟ್ಟೆ, ಯಲ್ಲಾಪುರ, ಡಿ.ಎಂ.ಪಾಳ್ಯ, ಶಿರಾಗೇಟ್, ಮಂಡಿಪೇಟೆ ಸರ್ಕಲ್, ಈದ್ಗಾ ಮೋಹಲ್ಲಾ ಸರ್ಕಲ್, ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಪಿ.ಎಚ್,ಕಾಲೊನಿ, ಮೇಳೆಕೋಟೆ, ದಾನ ಪ್ಯಾಲೇಸ್ ಮುಂಭಾಗ, ನಜರಾಬಾದ್, ಕುರಿಪಾಳ್ಯದಲ್ಲಿ ನಡೆಯಿತು.ಸಿಐಟಿಯು ಜಿಲ್ಲಾ ಖಾಜಾಂಚಿ ಎ.ಲೋಕೇಶ್, ಕಟ್ಟಡ ಕಾರ್ಮಿಕರ ಸಂಘ ಗೋವಿಂದರಾಜು, ಖಲೀಲ್, ಶಂಕರಪ್ಪ, ಶಿವಕುಮಾರ್ ಸ್ವಾಮಿ, ಲಕ್ಷ್ಮಿಕಾಂತ್, ಡಿವೈಎಫ್ಐ ಇಂತಿಯಾಜ್, ಮುಖಂಡ ಷಣ್ಮಖಪ್ಪ, ಸೈಯದ್ ಮುಜೀಬ್, ದರ್ಶನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.