ADVERTISEMENT

ಜ್ಯೋತಿಷಿಗಳ ನಂಬಿ ₹ 46 ಲಕ್ಷ ಕಳೆದುಕೊಂಡ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 16:29 IST
Last Updated 11 ಏಪ್ರಿಲ್ 2022, 16:29 IST
   

ತುಮಕೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಜ್ಯೋತಿಷಿಗಳನ್ನು ನಂಬಿ ನಗರದ ಉದ್ಯಮಿ ವಿಜಯ್‌ಬಾಬು ₹ 46 ಲಕ್ಷ ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿದೆ ಬಂದಿದೆ.

ನಗರದ ಸಪ್ತಗಿರಿ ಬಡಾವಣೆಯ ನಿವಾಸಿ ವಿಜಯ್‌ಬಾಬು ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದರು. ಜ್ಯೋತಿಷಿಗಳ ಬಳಿ ಹೋದರೆ ಪರಿಹಾರ ಸಿಗುತ್ತದೆ ಎಂದುಕೊಂಡಿದ್ದರು. ಅದೇ ಸಮಯದಲ್ಲಿ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡ ಜಾಹೀರಾತುನಿಂದ ಶಂಕರಶರ್ಮ ಎಂಬುವರನ್ನು ಸಂಪರ್ಕಿಸಿ ತಮ್ಮೆಲ್ಲ ಸಮಸ್ಯೆ ಹೇಳಿಕೊಂಡಿದ್ದರು. ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎಂದು ನಂಬಿಸಿದ್ದ ಶಂಕರಶರ್ಮ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅವರ ವಿವಿಧ ಬ್ಯಾಂಕ್‌ ಖಾತೆಗಳಿಗೆವಿಜಯ್‌ಬಾಬು ಹಣ ವರ್ಗಾಯಿಸಿದ್ದರು.

ಇದಾದ ಕೆಲವು ದಿನಗಳ ನಂತರ ಮಾಧವ್‌ರಾವ್‌ ಗುರೂಜಿ ಎಂಬ ಹೆಸರಲ್ಲಿ ವಿಜಯ್‌ಬಾಬುಗೆ ಕರೆ ಮಾಡಿದ ವ್ಯಕ್ತಿ ದೊಡ್ಡ ಮಟ್ಟದ ಪೂಜೆ, ಹೋಮ ನಡೆಸಿದರೆ ನಿಮ್ಮೆಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹೇಳಿ ತಮ್ಮ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಉದ್ಯಮಿಯು ಇಬ್ಬರಿಗೆ ಸೇರಿ ವಿವಿಧ ಹಂತಗಳಲ್ಲಿ ಹಣ ನೀಡಿದ್ದರು. ಹಣ ಪಡೆದ ನಂತರ ಜ್ಯೋತಿಷಿಗಳು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದಾರೆ.

ADVERTISEMENT

ತುಮಕೂರು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.