ADVERTISEMENT

ಪೈಪ್‌ಲೈನ್‌ ಮೂಲಕ ನೀರು ಹರಿದರೆ ಮಾತ್ರ ಕೆರೆ ತುಂಬಲು ಸಾಧ್ಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 15:56 IST
Last Updated 14 ನವೆಂಬರ್ 2020, 15:56 IST

ಶಿರಾ: ಪೈಪ್‌ಲೈನ್ ಮೂಲಕ ಹೇಮಾವತಿ ನೀರು ತಂದರೆ ಮಾತ್ರ ತಾಲ್ಲೂಕಿನ ಕೆರೆಗಳು ತುಂಬಲು ಸಾಧ್ಯ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಮಾತನಾಡಿ, ‘ತಾಲ್ಲೂಕಿನಲ್ಲಿ ಹೇಮಾವತಿ ನೀರಿನ ‌ಹೆಸರು ಹೇಳಿಕೊಂಡು ಇದುವರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕೀಯ ಲಾಭ ಪಡೆಯುವ ಕೆಲಸ ಮಾಡಿದ್ದಾರೆ. ಅವರಿಗೆ ನೀರು ಬರುವುದು ಬೇಕಿಲ್ಲ, ವಿಚಾರವನ್ನು ಜೀವಂತವಾಗಿಟ್ಟು ಜನರಿಗೆ ಟೋಪಿ ಹಾಕಿ ಚುನಾವಣೆಯಲ್ಲಿ ಲಾಭ ಪಡೆಯಲು ಪ್ರಯತ್ನ ನಡೆಸುತ್ತಿದ್ದರು. ಅದಕ್ಕೆ ಈ ಬಾರಿ ಬಿಜೆಪಿ ಕಡಿವಾಣ ಹಾಕಿದೆ’ ಎಂದರು.

ತಾಲ್ಲೂಕಿಗೆ ಹೇಮಾವತಿಯಿಂದ 0.9 ಟಿಎಂಸಿ ನೀರು ನಿಗದಿ ಮಾಡಲಾಗಿದೆ ಪ್ರಸ್ತುತ ತೆರೆದ ಹಳ್ಳದ ಮೂಲಕ ನೀರು ಬರುತ್ತಿದ್ದು ಜೊತೆಗೆ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿರುವುದರಿಂದ ಈಗ ನಿಗದಿಪಡಿಸಿರುವ ನೀರಿನಿಂದ ಕೆರೆಗಳನ್ನು ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ತುಂಬಿಸುವಂತಿದ್ದರೆ ಸತತ 3 ತಿಂಗಳು ನೀರು ಹರಿಸಬೇಕು ಇದಕ್ಕೆ ಬೇರೆ ಜಿಲ್ಲೆ ಮತ್ತು ತಾಲ್ಲೂಕಿನವರು ಅಡ್ಡಿ ಮಾಡುವುದರಿಂದ ಪೈಪ್‌ಲೈನ್ ಮೂಲಕ ನೀರು ತಂದರೆ ನೀರು ವ್ಯರ್ಥವಾಗದೆ ತಿಂಗಳಲ್ಲಿ ಶಿರಾ, ಕಳ್ಳಂಬೆಳ್ಳ, ಮದಲೂರು ಸೇರಿದಂತೆ ಎಲ್ಲ ಕೆರೆಗಳು ಮತ್ತು ಚೆಕ್‌ಡ್ಯಾಂಗಳನ್ನು ತುಂಬಿಸಿಕೊಳ್ಳಬಹುದು ಎಂದರು.

ADVERTISEMENT

‘ಪೈಪ್‌ಲೈನ್ ಮೂಲಕ ನೀರು ತರದಿದ್ದರೆ ನಮ್ಮ ಪಕ್ಷ ಸಹ ಜನತಿಹರ ಮೋಸ ಮಾಡಿದಂತಾಗುವುದು. ಇದು ನನ್ನ ವೈಯಕ್ತಿಯ ಅಭಿಪ್ರಾಯ. ಈ ಬಗ್ಗೆ ಈಗಾಗಲೇ ಅಧಿಕಾರಿಗಳು, ಮುಖ್ಯಮಂತ್ರಿ, ಸಂಸದರು, ಶಾಸಕರು ಚಿಂತನೆ ನಡೆಸುತ್ತಿದ್ದಾರೆ. ಈ ವರ್ಷ ಮುಖ್ಯಮಂತ್ರಿ ಭರವಸೆ ನೀಡಿರುವಂತೆ ಮದಲೂರು ಕೆರೆಗೆ ನೀರು ಹರಿಸಲಾಗುವುದು. ಮುಂದಿನ ವರ್ಷದಿಂದ ಪೈಪ್‌ಲೈನ್ ಮೂಲಕ ಹರಿಸಲು ಚಿಂತನೆ ನಡೆಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.