ತುಮಕೂರು: ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್ಒ) ಕಚೇರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕಡತಗಳನ್ನು ನೋಡಿ ಗ್ರಾಮಾಂತರ ಶಾಸಕ ಗೌರಿಶಂಕರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜನರನ್ನು ಬಲಿ ಪಡೆಯುತ್ತಿರುವ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯುವಂತೆ ಶುಕ್ರವಾರ ಪ್ರತಿಭಟಿಸಲು ಅರಣ್ಯಾಧಿಕಾರಿ ಕಚೇರಿಗೆ ಹೋಗಿದ್ದ ಶಾಸಕರು, ಕಡತಗಳ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದರು.
ಕಚೇರಿಯಲ್ಲಿ ನೆಲದ ಮೇಲೆ ಕೆಲವು ಕಡತಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೆಲವು ಕಡತಗಳನ್ನು ಎಲ್ಲೆಂದರಲ್ಲಿ ಮೂಟೆ ಕಟ್ಟಿ ಇಡಲಾಗಿತ್ತು. ಇದರಿಂದ ಕೆಂಡಾಮಂಡಲರಾದ ಶಾಸಕರು ‘ಯಾಕ್ರಿ ಹೀಗೆ ಫೈಲ್ಗಳನ್ನು ಇಟ್ಟಿದ್ದೀರಾ?. ಎಲ್ಲಾ ಫೈಲ್ಗಳು ಸರಿಯಾಗಿ ಇದ್ದಾವೇನ್ರಿ. ಫೈಲ್ಗಳನ್ನು ಹಿಂಗೆ ಎಲ್ಲೆಂದರಲ್ಲಿ ಬಿಸಾಡಿದರೇ ಮಿಸ್ ಆಗಲ್ವೇನ್ರಿ. ನಮ್ಮ ಗ್ರಾಮಾಂತರ ಕ್ಷೇತ್ರದ 1965ನೇ ಇಸ್ವಿ ಫೈಲ್ ತೋರಿಸ್ರಿ’ ಎಂದು ಡಿಎಫ್ಒ ಅವರನ್ನು ತರಾಟೆಗೆ ತೆಗೆದುಕೊಂಡರು.
ಶಾಸಕರ ತರಾಟೆಯಿಂದ ಡಿಎಫ್ಓ ಗಿರೀಶ್ ತಬ್ಬಿಬ್ಬಾದರು. ಇಲ್ಲ ಸಾರ್, ಸರಿ ಮಾಡ್ತಿವಿ ಎಂದು ಸಮರ್ಥಿಸಿಕೊಂಡರು.
15 ದಿನ ಗಡುವು: ‘ಜನರು ಚಿರತೆ ದಾಳಿಯಿಂದ ಆತಂಕಗೊಂಡಿದ್ದಾರೆ. ನೀವಿಲ್ಲಿ ಎಸಿ ರೂಂನಲ್ಲಿ ಅರಾಮಾಗಿ ಕುಳಿತಿದ್ದೀರಾ. ನಿಮ್ಮ ಎಸಿಎಫ್, ಆರ್ಎಫ್ಒ ನಾಲಾಯಕ್ಗಳಾಗಿದ್ದಾರೆ. ಚಿರತೆ ಹಿಡಿಯಲು ನಿಮಗೆ 15 ದಿನ ಗಡುವು ನೀಡಲಾಗುವುದು. ಅಷ್ಟರಲ್ಲಿ ಚಿರತೆ ಹಿಡಿಯದಿದ್ದರೇ ಪರಿಣಾಮ ನೆಟ್ಟಗಿರುವುದಿಲ್ಲ. ಜನರೇ ನಿಮ್ಮ ವಿರುದ್ಧ ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.