ತುಮಕೂರು: ಆಧುನಿಕ ಕಾಲದಲ್ಲಿಯೂ ಸಹ ರಾಜ್ಯದಾದ್ಯಂತ ನಾಟಕ ಪ್ರದರ್ಶನಗಳು ಹೆಚ್ಚೆಚ್ಚು ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ರಂಗನಿರ್ದೇಶಕ ನಟರಾಜ್ ಹೊನ್ನವಳ್ಳಿ ಅಭಿಪ್ರಾಯಪಟ್ಟರು.
ತುಮಕೂರಿನ ಬೆಳಗುಂಬ ರಸ್ತೆಯಲ್ಲಿರುವ ಮಾರುತಿ ವಿದ್ಯಾಮಂದಿರದಲ್ಲಿ ಸಮ್ಮತ ಥಿಯೇಟರ್ಸ್ನಿಂದ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗ ಪ್ರಯೋಗ ಪರಿಣಾಮಕಾರಿ ಮಾಧ್ಯಮ. ಹಾಗಾಗಿ ಈ ಶಿಬಿರದಲ್ಲಿ ಮಕ್ಕಳು ನಾಟಕ ಪ್ರದರ್ಶನಕ್ಕೆ ಪ್ರವೇಶ ಪಡೆಯಲು ಬೇಕಾದ ವಿಷಯಗಳನ್ನು ಕಲಿಯಲಿದ್ದಾರೆ ಎಂದು ಹೇಳಿದರು.
ಸಿದ್ದಾರ್ಥ ಪ.ಪೂ. ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ಕುಮಾರ್ ಮಾತನಾಡಿ, ‘ರಂಗ ಪ್ರಯೋಗಗಳು ತುಮಕೂರಿನಲ್ಲಿ ನಿರಂತರವಾಗಿ ನಡೆಯುತ್ತಿದೆ. ತುಮಕೂರು ನಾಟಕ ರಂಗಗಳ ತವರೂರಾಗಿದೆ. ಇಲ್ಲಿ ಪ್ರತಿ ವಾರ ಪೌರಾಣಿಕ ನಾಟಕಗಳು ನಡೆಯುತ್ತಿರುವುದು ಶ್ಲಾಘನೀಯ’ ಎಂದರು.
ಮಾರುತಿ ವಿದ್ಯಾ ಸಂಸ್ಥೆಯ ಮುರಳೀಧರ ಮಾತನಾಡಿ, ‘ನಮ್ಮ ಕ್ಯಾಂಪಸ್ನಲ್ಲಿ ಸಮ್ಮತ ಥಿಯೇಟರ್ಸ್ನವರು ಬಂದು ಮಕ್ಕಳಿಗೆ ಶಿಬಿರ ಹಾಗೂ ನಾಟಕ ಹೇಳಿಕೊಡುತ್ತಿರುವುದು ಖುಷಿಯ ವಿಚಾರ. ಅತ್ಯಂತ ಕ್ರಿಯಾಶೀಲವಾಗಿ ಮಕ್ಕಳಿಗೆ ಅವರು ನಾಟಕಗಳನ್ನು ಕಲಿಸಿದರು’ ಎಂದು ಹೇಳಿದರು.
ಸಮಾರೋಪ ಸಮಾರಂಭದ ಬಳಿಕ ಮಕ್ಕಳು ಬಿ.ವಿ.ಕಾರಂತರ ‘ಪಂಜರ ಶಾಲೆ’, ‘ಡಾಣಾ ಡಂಗೂರ’ ಹಾಗೂ ಯಕ್ಷಗಾನ ನಾಟಕ ಪ್ರದರ್ಶಿಸಿದರು.
ಪತ್ರಕರ್ತ ಉಗಮ ಶ್ರೀನಿವಾಸ್,ಸೋಮಶೇಖರ್ ಹಾಗೂ ಸುನಿಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.