ADVERTISEMENT

ತುರುವೇಕೆರೆ: ವೆಂಟಿಲೇಟರ್‌ ಇದೆ; ಐಸಿಯು ಇಲ್ಲ!

ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯ ಸ್ಥಿತಿ; ಕೊರೊನಾ ಸೋಂಕು ಕಾಣಿಸಿಕೊಂಡರೆ ಗತಿ ಏನು– ಸಾರ್ವಜನಿಕರ ಪ್ರಶ್ನೆ

ಪಾಂಡುರಂಗಯ್ಯ ಎ.ಹೊಸಹಳ್ಳಿ
Published 2 ಏಪ್ರಿಲ್ 2020, 20:00 IST
Last Updated 2 ಏಪ್ರಿಲ್ 2020, 20:00 IST
ತುರುವೇಕೆರೆಯ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಜ್ವರ, ಕಫ ಪರೀಕ್ಷಾ ಕೊಠಡಿ
ತುರುವೇಕೆರೆಯ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಜ್ವರ, ಕಫ ಪರೀಕ್ಷಾ ಕೊಠಡಿ   

ತುರುವೇಕೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹೆಚ್ಚಿನ ರೋಗಿಗಳು ಬರುತ್ತಾರೆ. ಇದಕ್ಕೆ ಪೂರಕವಾದ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.

ಕೊರೊನಾ ಶಂಕಿತರ ಚಿಕಿತ್ಸೆಗೆಂದು ಆರೋಗ್ಯ ಇಲಾಖೆಯು ಒಂದು ವೆಂಟಿಲೇಟರ್ ಕೊಟ್ಟಿದೆ. ಇದನ್ನು ಚಾಲನೆ ಮಾಡಲು ಐಸಿಯುನೇ ಇಲ್ಲ. ಹೀಗಾಗಿ, ಇದು ನಾಮಕಾವಸ್ಥೆಯ ವೆಂಟಿಲೇಟರ್ ಆಗಿದೆ.

ಐಸೊಲೇಷನ್‍ ವಾರ್ಡ್‌: ಒಂದು ಐಸೊಲೇಷನ್‍ ವಾರ್ಡ್‌ ಇದೆ. ಅಲ್ಲಿ 4 ಬೆಡ್‍ಗಳಿದ್ದು, ಅವುಗಳನ್ನೇ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ಇದರ ಪಕ್ಕದ ಕೊಠಡಿಯಲ್ಲಿ ಸೋಂಕಿತ ವ್ಯಕ್ತಿಯ ಸಂಪರ್ಕ ಇರುವವರಿಗೆ ಕ್ವಾರಂಟೈನ್‍ ಸಹ ತೆರೆಯಲಾಗಿದೆ. ಒಂದು ವೇಳೆ ಶಂಕಿತರ ಸಂಖ್ಯೆ ಉಲ್ಬಣಿಸಿದರೆ ಆಸ್ಪತ್ರೆಯ ಕೆಳಭಾಗದ ವಾರ್ಡ್‍ಗಳು ಮತ್ತು ಮೀಟಿಂಗ್ ಹಾಲ್‍ನಲ್ಲಿಯೂ ಮತ್ತಷ್ಟು ಹಾಸಿಗೆಗಳನ್ನು ಹಾಕುವ ಸಿದ್ಧತೆ ಕೂಡ ಮಾಡಿಕೊಂಡಿದ್ದಾರೆ.

ADVERTISEMENT

ತಜ್ಞ ವೈದ್ಯರಿಲ್ಲ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ತಜ್ಞ ವೈದ್ಯರಿಲ್ಲ. ಹಾಗೆಯೇ ವೆಂಟಿಲೇಟರ್ ನಿರ್ವಹಣೆ ಮಾಡುವ ತಜ್ಞರೂ ಇಲ್ಲ.ಅರಿವಳಿಕೆ ಮತ್ತು ಫಿಜಿಷಿಯನ್ ವೈದ್ಯರೇ ತಕ್ಕಮಟ್ಟಿಗೆ ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಜ್ವರ, ಕೆಮ್ಮು, ನೆಗಡಿ ಬಂದವರನ್ನು ಉಳಿದ ರೋಗಿಗಳಿಂದ ಪ್ರತ್ಯೇಕಿಸಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನೇರವಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.

‘ಉಸಿರಾಟದ ತೊಂದರೆ ಉಳ‍್ಳವರಿಗೆ ನೀಡುವ ಸೆಂಟರ್ ಆಕ್ಸಿಜನ್ ಸರಬರಾಜು ಕೂಡ ಇಲ್ಲ. ಕೊರೊನಾ ಪಿಪಿಇ ಕಿಟ್‍ಗಳು ಇಲ್ಲದೆ ವೈದ್ಯರು ಅಸುರಕ್ಷತೆಯಿಂದ ರೋಗಿಗೆ ಚಿಕಿತ್ಸೆ ನೀಡಬೇಕಾಗಿದೆ. ಮುಖ್ಯವಾಗಿ ಮಾಸ್ಕ್‌, ಕೈಗವಸು, ಸ್ಯಾನಿಟೈಸರ್‌ ಇಲ್ಲದೆ ವೈದ್ಯರೇ ಸ್ವಂತ ಹಣದಿಂದ ತಂದುಕೊಳ್ಳಬೇಕಾಗಿದೆ’ ಎಂದು ವೈದ್ಯರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಸಲಕರಣೆಗಳಿಲ್ಲ: ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಇಲ್ಲಿ ಸಲಕರಣೆಗಳಿಲ್ಲ. ತುಮಕೂರಿನಿಂದ ತರುವ ಯಂತ್ರಕ್ಕಾಗಿ ಕಾಯಬೇಕು. ಇದರಿಂದ ಗುಬ್ಬಿ, ಚಿಕ್ಕನಾಯನಹಳ್ಳಿ ತಾಲ್ಲೂಕುಗಳಿಂದ ಚಿಕಿತ್ಸೆಗಾಗಿ ಬರುವ ಜನ ತಿಂಗಳುಗಟ್ಟಲೆ ಕಾಯಬೇಕಿದೆ. ಸೋಂಕು ತಗುಲಿದವರಿಗೆ ಸಿಬಿಸಿ ಪರೀಕ್ಷೆ ಮಾಡಲು ಇಲ್ಲಿ ಯಂತ್ರವಿಲ್ಲ. ಅದಕ್ಕಾಗಿ ಖಾಸಗಿ ಲ್ಯಾಬ್‍ಗಳನ್ನೇ ಆಶ್ರಯಿಸಬೇಕಾಗಿದೆ.

ಅಲ್ಟ್ರಾಸೌಂಡ್‍ ಸ್ಕ್ಯಾನಿಂಗ್‍ ಬೇಕು: ಗರ್ಭಿಣಿಯರು, ಹೊಟ್ಟೆನೋವಿನಿಂದ ನರಳುವ ರೋಗಿಗಳು, ಕಿಡ್ನಿಯಲ್ಲಿ ಕಲ್ಲು, ದೇಹದ ಇನ್ನಿತರ ಭಾಗಗಳು ಊತ ಬಂದಾಗ ಪರೀಕ್ಷಿಸಲು ಅಲ್ಟ್ರಾಸೌಂಡ್‍ ಸ್ಕ್ಯಾನಿಂಗ್‍ ಸೌಲಭ್ಯ ಇಲ್ಲವಾಗಿದೆ.

ಬ್ಲಡ್‍ ಬ್ಯಾಂಕ್‍ ಸ್ಥಗಿತ: ತಾಂತ್ರಿಕ ಸಮಸ್ಯೆಯಿಂದ ತಾತ್ಕಾಲಿಕವಾಗಿಬ್ಲಡ್‍ ಬ್ಯಾಂಕ್‍ ಸ್ಥಗಿತಗೊಂಡಿದ್ದು, ಅಪಘಾತ ಹಾಗೂ ಇನ್ನಿತರ ತುರ್ತು ಸಂದರ್ಭದಲ್ಲಿ ಜನರು ಪರದಾಡುವಂತಾಗಿದೆ. ಶವಾಗಾರ, ರೋಗಿಗಳಿಗೆ ಕ್ಯಾಂಟೀನ್ ಸೌಲಭ್ಯದ ಕೊರತೆಯೂ ಇದೆ. ಆಸ್ಪತ್ರೆಯ ಕಾಂಪೌಂಡ್‍ ಕಾಮಗಾರಿಯೂ ಅಪೂರ್ಣಗೊಂಡಿದೆ.

ಮುಖ್ಯ ವೈದ್ಯರಿಲ್ಲ

ಕೊರೊನಾ ಸೋಂಕಿನ ಭೀತಿಯಿಂದ ಬಹುಪಾಲು ಖಾಸಗಿ ಆಸ್ಪತ್ರೆಗಳು ಮುಚ್ಚಿವೆ. ಇದರಿಂದ ಜನರು ಸಾರ್ವಜನಿಕ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ವರ್ಷಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಅದಕ್ಕೆ ಅನುಗುಣವಾಗಿ ವೈದ್ಯರು, ಇತರೆ ಸಿಬ್ಬಂದಿ ಇಲ್ಲವಾಗಿದ್ದು, ಈ ಸಮಸ್ಯೆ ಬಹುವಾಗಿ ಕಾಡುತ್ತಿದೆ.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಧಿಕಾರಿ ಹುದ್ದೆ ಖಾಲಿಯಾಗಿ ವರ್ಷಗಳೇ ಕಳೆದಿವೆ. ಅದೇ ರೀತಿ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಹುದ್ದೆಯೂ ಖಾಲಿ ಇದೆ. ‘ಡಿ’ ಗ್ರೂಪ್‌ನ 29 ಹುದ್ದೆಗಳಲ್ಲಿ, 15 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಇಬ್ಬರು ನಿರಂತರ ಗೈರಾಗಿರುತ್ತಾರೆ. ಹೊರಗುತ್ತಿಗೆ ಆಧಾರದ ಮೇಲೆ 9 ಜನ ಕಾರ್ಯನಿರ್ವಹಿಸುತ್ತಾರೆ.

ಪ್ರಶಸ್ತಿ

ಆಸ್ಪತ್ರೆಯ ಸ್ವಚ್ಛತೆ ಮತ್ತು ನೈರ್ಮಲ್ಯ ನಿರ್ವಹಣೆಗಾಗಿ 2018-19ರಲ್ಲಿ ಕಾಯಕಲ್ಪ ಪ್ರಶಸ್ತಿ ಪಡೆದ ಜಿಲ್ಲೆಯ ಮೊದಲ ಆಸ್ಪತ್ರೆ ಇದಾಗಿದೆ. ನೈರ್ಮಲ್ಯ ಕಾಪಾಡಿಕೊಂಡರೂ ಅಗತ್ಯ ಸೌಲಭ್ಯಗಳ ಕೊರತೆ ನೀಗಿಸಿದರೆ ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡಬಹುದು ಎನ್ನುತ್ತಾರೆ ಇಲ್ಲಿನ ವೈದ್ಯರು.

*

ಇದುವರೆಗೂ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬಂದಿಲ್ಲ. ಮುಂಜಾಗೃತಾ ಕ್ರಮಗಳನ್ನು ಕೈಗೊಂಡು, ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ

- ಶ್ರೀಧರ್, ಪ್ರಭಾರ ವೈದ್ಯಧಿಕಾರಿ, ತುರುವೇಕೆರೆ

*

ಸರ್ಕಾರಿ ಆಸ್ಪತ್ರೆಯ ಕೆಲ ವೈದ್ಯರು ಸಂಜೆ ಕ್ಲಿನಿಕ್‍ಗಳನ್ನು ತೆರೆದಿದ್ದು, ಆಸ್ಪತ್ರೆಗೆ ಬರುವ ರೋಗಿಗಳನ್ನು ಬದ್ಧತೆಯಿಂದ ಪರೀಕ್ಷಿಸುವುದಿಲ್ಲ

- ಡಾ.ಚಂದ್ರಯ್ಯ, ತೊರೆಮಾವಿನಹ‍ಳ್ಳಿ

*

ಹೃದಯ ಸಂಬಂಧಿ ಕಾಯಿಲೆ, ಅಪಘಾತಕ್ಕೆ ತುತ್ತಾದವರಿಗೆ ತಾಲ್ಲೂಕುಮಟ್ಟದಲ್ಲಿ ಶಸ್ತ್ರ ಚಿಕಿತ್ಸೆಗೆ ಅವಕಾಶ ಇರುವಂತೆ ಸೌಲಭ್ಯ ಒದಗಿಸಬೇಕು

- ನರಸಿಂಹಸ್ವಾಮಿ, ತುರುವೇಕೆರೆ

*

ಬಡವರು, ಅಸಹಾಯಕ ಗರ್ಭಿಣಿಯರು, ಸ್ತ್ರೀ ಸಂಬಂಧಿ ರೋಗಗಳ ಪರೀಕ್ಷೆಗೆ ಅಲ್ಟ್ರಾ ಸೌಂಡ್‍ ಸ್ಕ್ಯಾನಿಂಗ್‍ ಸೌಲಭ್ಯ ನೀಡಿ, ತಜ್ಞ ವೈದ್ಯರನ್ನು ನಿಯೋಜಿಸಬೇಕು

- ನೇತ್ರಾವತಿ, ತುರುವೇಕೆರೆ, ಅಕ್ಕನ ಬಳಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.