ಗುಬ್ಬಿ: ಚೇಳೂರು ಹೋಬಳಿಯ ಬಸವನಪಾಳ್ಯದಲ್ಲಿಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿರುವ ಇಂಗುಕೆರೆ ಅಂತರ್ಜಲ ವೃದ್ಧಿಗೆ ಮಾದರಿಯಾಗಿ ನಿಂತಿದೆ.
2019ರಲ್ಲಿ ಅಂದಾಜು ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಕೆರೆ ನಿರ್ಮಿಸಿದ ವರ್ಷವೇ ಸಂಪೂರ್ಣವಾಗಿ ತುಂಬಿತ್ತು. 22 ಎಕರೆ ವಿಸ್ತೀರ್ಣದಲ್ಲಿ ನೀರು ಸಂಗ್ರಹವಾಗುತ್ತದೆ. ನೀರನ್ನು ಹೊರಗಡೆ ಬಿಡದೆ ಇರುವುದರಿಂದ ಸುತ್ತಮುತ್ತಲ ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯ ಅಂತರ್ಜಲಮಟ್ಟ ಸುಧಾರಣೆಯಾಗಿದೆ.
ಬತ್ತಿದ್ದ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. ಇದರಿಂದ ಜನರುಇಂತಹ ಯೋಜನೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಮಳೆ ನೀರಿನಿಂದಲೇ ಕೆರೆ ತುಂಬುವ ವ್ಯವಸ್ಥೆ ಮಾಡಲಾಗಿದೆ.ಕೆರೆ ಕಟ್ಟಿದ ವರ್ಷವೇ ಕೆರೆ ಭರ್ತಿಯಾಗಿತ್ತು.
‘ಇಂಗುಕೆರೆಗಳ ನಿರ್ಮಾಣದಿಂದ ಜಲಮರುಪೂರಣ ವ್ಯವಸ್ಥೆಯಲ್ಲಿ ಚೇತರಿಕೆ ಕಂಡಿದೆ.ತಾಲ್ಲೂಕಿನಲ್ಲಿ ಇಂತಹ ಇಂಗು ಕೆರೆಗಳ ಅವಶ್ಯಕತೆ ಇದೆ. ಜಲ ಮರುಪೂರಣ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ ಅಗತ್ಯ ಇರುವೆಡೆ ಚೆಕ್ ಡ್ಯಾಂ ಹಾಗೂ ಕೆರೆಗಳನ್ನು ನಿರ್ಮಿಸಿ ಜಲ ಸಂಗ್ರಹ ಹೆಚ್ಚಿಸಲಾಗುವುದು’ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ವಿನಯ್.
ಕೆರೆ ನಿರ್ಮಾಣಕ್ಕಿಂತ ಮೊದಲು ಅಂತರ್ಜಲ ಮಟ್ಟ 900 ಅಡಿಗಳಷ್ಟು ಆಳಕ್ಕೆ ಇಳಿದಿತ್ತು. ಕೊಳವೆ ಬಾವಿಗಳು ವಿಫಲವಾಗಿದ್ದವು. ಕೆರೆ ಕಟ್ಟಿದ ನಂತರ ಅಂತರ್ಜಲ ಮಟ್ಟ ಸುಧಾರಿಸಿದೆ. ಈಗ ಜಿಲ್ಲೆಯಲ್ಲಿಯೇ ಗುಬ್ಬಿ ತಾಲ್ಲೂಕಿನಲ್ಲಿ ಅಂತರ್ಜಲ ಮರುಪೂರಣ ವ್ಯವಸ್ಥೆಯ ಸ್ಥಿತಿ ಉತ್ತಮಗೊಂಡಿದೆ ಎನ್ನುತ್ತಾರೆ ರೈತ ಕೆಂಪರಾಜು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.