ADVERTISEMENT

ತಿಪಟೂರು: ತ್ಯಾಜ್ಯ ಸಂಸ್ಕರಣೆಗೆ ಹೊಸ ಹೆಜ್ಜೆ

ತಿಪಟೂರು ನಗರಸಭೆಯಲ್ಲಿ 15 ಎಕರೆ ಪ್ರದೇಶದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 7:16 IST
Last Updated 8 ಸೆಪ್ಟೆಂಬರ್ 2025, 7:16 IST
ತಿಪಟೂರು ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಘನತ್ಯಾಜ್ಯ ವಿಲೇವಾರಿ ಘಟಕ 
ತಿಪಟೂರು ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಘನತ್ಯಾಜ್ಯ ವಿಲೇವಾರಿ ಘಟಕ    

ತಿಪಟೂರು: ನಗರಸಭೆ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪರಿಸರ ಸ್ನೇಹಿ ನಗರ ನಿರ್ಮಾಣದ ಕನಸಿನೊಂದಿಗೆ ₹1 ಕೋಟಿಗೂ ಹೆಚ್ಚು ವೆಚ್ಚದಲ್ಲಿ 15 ಎಕರೆ ಪ್ರದೇಶದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಅಭಿವೃದ್ಧಿಪಡಿಸಲು ಮುಂದಾಗಿದೆ.

ನಗರದ ಮನೆಗಳಿಂದ ಸಂಗ್ರಹವಾಗುವ ಕಸದ ನಿರ್ವಹಣೆಗೆ ಈಗಾಗಲೇ ನೂರಕ್ಕೂ ಹೆಚ್ಚು ಕಸ ಸಂಗ್ರಹಗಾರರು ಹಾಗೂ ವಾಹನ ಚಾಲಕರು ನಿಯೋಜಿತರಾಗಿದ್ದು, ದಿನನಿತ್ಯ ಸಂಗ್ರಹಣೆ ಕಾರ್ಯವನ್ನು ಸುಗಮಗೊಳಿಸಲಾಗುತ್ತಿದೆ.

ಪ್ರತಿನಿತ್ಯ ನಗರದ ಮನೆಗಳಿಂದ 13ರಿಂದ 15 ಟನ್, ಬೀದಿಗಳಿಂದ 2ರಿಂದ 3 ಟನ್, ಮಳಿಗೆಗಳಿಂದ 3ರಿಂದ 4 ಟನ್ ಒಟ್ಟಾರೆ ದಿನಕ್ಕೆ 21 ರಿಂದ 23 ಟನ್‌ನಷ್ಟು ಕಸ ಸಂಗ್ರಹವಾಗುತ್ತಿದ್ದು, ಇದರ ವಿಲೇವಾರಿ ಹಾಗೂ ಸಂಸ್ಕರಣೆ ಸವಾಲಾಗಿದೆ.

ADVERTISEMENT

ನಗರಸಭೆ ತ್ಯಾಜ್ಯ ಸಂಸ್ಕರಣೆಯನ್ನು ತಾಂತ್ರಿಕವಾಗಿ ನವೀಕರಿಸಲು ನಿರ್ಧಾರ ಕೈಗೊಂಡಿದ್ದು, ಒಣ ಮತ್ತು ಹಸಿ ಕಸ ವಿಂಗಡಣೆ ಕಡ್ಡಾಯ ಮಾಡುವ ಕ್ರಮ ಜಾರಿಗೆ ಬಂದಿದೆ. ಈ ಮೂಲಕ ಮರುಬಳಕೆಯಾಗುವ ವಸ್ತುಗಳನ್ನು ಪ್ರತ್ಯೇಕಿಸಿ ಅಭಿವೃದ್ಧಿ ಕೆಲಸಗಳಿಗೆ ಬಳಸುವ ವ್ಯವಸ್ಥೆ, ಉಳಿದ ಏರುತ್ಯಾಜ್ಯದಿಂದ ಗೊಬ್ಬರ ಹಾಗೂ ಬಯೋಗ್ಯಾಸ್ ಉತ್ಪಾದಿಸುವ ಯೋಜನೆ ರೂಪಿಸಲಾಗಿದೆ.

ಪರಿಸರ ಸಂರಕ್ಷಣೆ, ಸ್ವಚ್ಛ ಬೀದಿ ಹಾಗೂ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗುತ್ತಿದೆ. ತ್ಯಾಜ್ಯ ಸಂಸ್ಕರಣೆಯಲ್ಲಿ ಆಧುನಿಕ ಹೆಜ್ಜೆಗಳನ್ನಿಟ್ಟು ಪರಿಸರ ಸ್ನೇಹಿ ನಗರ ನಿರ್ಮಾಣದ ಗುರಿಯನ್ನು ನಗರಸಭೆ ಹೊಂದಿದೆ.

ನಗರದಲ್ಲಿ ಪ್ರತಿದಿನ ಮನೆಮನೆಗಳಿಂದ ಸಂಗ್ರಹವಾಗುವ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ ಸಂಸ್ಕರಿಸುವ ಮೂಲಕ ಪರಿಸರ ಮಾಲಿನ್ಯ ಕಡಿಮೆಗೊಳಿಸುವುದು ಈ ಯೋಜನೆ ಉದ್ದೇಶ.

ತ್ಯಾಜ್ಯ ಸಂಗ್ರಹಣೆಗೆ ನಗರದಲ್ಲಿ ಪ್ರತಿದಿನ 14 ವಾಹನ, ನಾಲ್ಕು ಟ್ರ್ಯಾಕ್ಟರ್, ಒಂದು ಜೆಸಿಬಿ ಸೇರಿದಂತೆ ನೂರಕ್ಕೂ ಹೆಚ್ಚು ಕಸ ಸಂಗ್ರಹಗಾರರು ಹಾಗೂ ವಾಹನ ಚಾಲಕರು ಕೆಲಸ ನಿರ್ವಹಿಸುತ್ತಿದ್ದಾರೆ. ವಾಹನಗಳ ಜೊತೆ ಮಾಹಿತಿ ಸಮುದಾಯ ಸಂಗ್ರಹಕಾರರು ಹಾಗೂ ಅರಿವುಗಾರರನ್ನು ನೇಮಿಸುವ ಮೂಲಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ತರಲಾಗುತ್ತಿದೆ. ಬೀದಿಗಳ ಸ್ವಚ್ಛತೆ ಕಾಪಾಡುವ ಜೊತೆಗೆ ಸಂಗ್ರಹಿಸಿದ ಕಸವನ್ನು ನೇರವಾಗಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ರವಾನಿಸಲಾಗುತ್ತಿದೆ.

ಜನರ ಮನಸ್ಥಿತಿಯಲ್ಲಿ ಬದಲಾಗದ ಹೊರತು ಎಷ್ಟೇ ಕೋಟ್ಯಂತರ ಹೂಡಿಕೆಯಾದರೂ ಅದು ಫಲಪ್ರದವಾಗುವುದಿಲ್ಲ. ಹಸಿ ಮತ್ತು ಒಣ ಕಸ ವಿಂಗಡಣೆ ಜನರಿಗೆ ಕಡ್ಡಾಯ ಮಾಡಲಾಗಿದೆ. ಆದರೂ ಬಹುತೇಕ ಮನೆಗಳಲ್ಲಿ ಇಂದಿಗೂ ಮಿಶ್ರ ಕಸವೇ ಹೊರಬರುತ್ತದೆ ಎಂಬ ದೂರು ಇದೆ.

ತ್ಯಾಜ್ಯ ವಿಂಗಡಣೆ ಎಂದರೆ ಕೇವಲ ಕಾನೂನು ಪಾಲನೆ ಅಲ್ಲ, ಅದು ಭವಿಷ್ಯದ ಹೂಡಿಕೆ. ಮನಸ್ಸು ಬದಲಾದಾಗ ಮಾತ್ರ ಕಸವು ಕಸದಂತೆ ಕಾಣದೆ, ಸಂಪನ್ಮೂಲವಾಗಿ ರೂಪಾಂತರಗೊಳ್ಳುತ್ತದೆ. ನಗರಸಭೆಯ ಪ್ರಯತ್ನವನ್ನು ಬಲಪಡಿಸಲು ನಾಗರಿಕರ ನಿಷ್ಠೆಯೇ ದೊಡ್ಡ ಹೂಡಿಕೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.

 ಘನತ್ಯಾಜ್ಯ ವಿಲೇವಾರಿ ಘಟಕ ಬಳಿಯ ಕಸದ ರಾಶಿ
ಕೆ.ಷಡಕ್ಷರಿ. ಶಾಸಕರು.
ರೇಣುಕಾಮೂರ್ತಿ 
ಅಲ್ಲಾಭಕಾಷ್
ಬಸವರಾಜು.ಡಿ.ಆರ್
ಶಶಿಕಲಾ
ಕಿರಣ್

ಮತ್ತೊಂದು ಘಟಕಕ್ಕೆ ಚಿಂತನೆ

ನಗರ ವ್ಯಾಪ್ತಿಯಲ್ಲಿ ಕಸದ ಸಮಸ್ಯೆಯಿತ್ತು. ಮೊದಲೆಲ್ಲಾ ಕಸ ಸಂಗ್ರಹಿಸಿ ಟೆಂಡರ್ ಮಾಡಲಾಗುತ್ತಿತ್ತು. ಆದರೆ ಶಾಸಕನಾದ ನಂತರ ವೈಜ್ಞಾನಿಕವಾಗಿ ಚಿಂತಿಸಿ 15 ಎಕರೆ ಪ್ರದೇಶದಲ್ಲಿ ಘನತ್ಯಾಜ್ಯ ಘಟಕ ತೆರೆದು ಸಮಸ್ಯೆ ಸುಧಾರಿಸಲಾಗುತ್ತಿದೆ. ಎರಡು ವಾರ್ಡ್‌ಗೆ ಒಂದು ವಾಹನ ನಿಗದಿ ಮಾಡಲಾಗಿದ್ದು ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ನಗರ ಬೆಳೆಯುತ್ತಿರುವುದರಿಂದ ಮತ್ತೊಂದು ತ್ಯಾಜ್ಯ ಘಟಕ ಪ್ರಾರಂಭ ಮಾಡಲು ಚಿಂತನೆ ಮಾಡಲಾಗಿದೆ. ಕೆ.ಷಡಕ್ಷರಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.